ಬೆಂಗಳೂರು: ಕಾಂಗ್ರೆಸ್ ನಾಯಕನ ಪರವಾಗಿ ಬಿಜೆಪಿ ನಾಯಕರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಪೇಜಾವರ ಶ್ರೀಗಳು ಪತ್ರ ಬರೆದಿದ್ದಾರೆ. ಕಾಂಗ್ರೆಸ್ಸಿನ ಹಿರಿಯ ಮುಸ್ಲಿಂ ನಾಯಕ ಜಿ.ಎ ಭಾವ ಪರವಾಗಿ ನಳಿನ್ ಹಾಗೂ ಯಡಿಯೂರಪ್ಪ ಇಬ್ಬರಿಗೂ ಶ್ರೀಗಳು ಪತ್ರ ಬರೆದಿದ್ದಾರೆ.
ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನಾಗಿ ಮಾಜಿ ಪೋಲಿಸ್ ಅಧಿಕಾರಿ ಕಾಂಗ್ರೆಸ್ ಮುಖಂಡ ಜಿ.ಎ ಭಾವ ಅವರನ್ನು ನೇಮಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಆ ಸ್ಥಾನಕ್ಕೆ ಮತ್ತೋರ್ವ ನಿವೃತ್ತ ಪೊಲೀಸ್ ಅಧಿಕಾರಿ ಹಾಲಿ ಬಿಜೆಪಿ ಮುಖಂಡ ಅಜೀಂ ಅವರನ್ನ ನೇಮಿಸಲು ಯಡಿಯೂರಪ್ಪ ತೀರ್ಮಾನಿಸಿದ್ರು. ಆದರೆ ಕಾಂಗ್ರೆಸ್ ಮುಖಂಡ ಜಿ.ಎ ಭಾವ ಅವರನ್ನು ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷರನ್ನಾಗಿ ಮುಂದುವರಿಸುವಂತೆ ಪೇಜಾವರ ಶ್ರೀಗಳು ಇಬ್ಬರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಪೇಜಾವರ ಶ್ರೀಗಳ ಪತ್ರದ ಹೊರತಾಗಿಯೂ ಅಕ್ಟೋಬರ್ 16 ರಂದು ಅಜೀಂರನ್ನ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದೆ. ಆದರೆ ಕಾಂಗ್ರೆಸ್ ಮುಖಂಡ ಜಿ.ಎ.ಭಾವ ಮಾತ್ರ ಅಧ್ಯಕ್ಷ ಸ್ಥಾನ ತಮಗೆ ಒಲಿಯಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಮೂಲತಃ ಬಂಟ್ವಾಳದವರಾದ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಕಾಂಗ್ರೆಸ್ಸಿನ ಮುಸ್ಲಿಂ ಮುಖಂಡರ ಪರವಾಗಿ ಪೇಜಾವರ ಶ್ರೀಗಳು ಪತ್ರ ಬರೆದದ್ದು ಸಿಎಂ ಯಡಿಯೂರಪ್ಪರಿಗೂ ಇರಿಸು ಮುರಿಸು ಉಂಟುಮಾಡಿದೆ ಎನ್ನಲಾಗಿದೆ.
ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲಿಗೂ ಪೇಜಾವರ ಶ್ರೀಗಳು ಪತ್ರ ಬರೆದಿದ್ದು, ಸಂಘ ಪರಿವಾರದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಪೇಜಾವರ ಶ್ರೀಗಳ ಪತ್ರ ಸಿಎಂ ಯಡಿಯೂರಪ್ಪರ ನೆಮ್ಮದಿ ಕೆಡಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಜಿ.ಎ ಭಾವ ಪರವಾಗಿ ಲಾಬಿ ನಡೆಸಿದ್ರೆ ಯಡಿಯೂರಪ್ಪ ಹಾಗೂ ನಳಿನ್ ಕುಮಾರ್ ಕಟೀಲು ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ಕಾರಣವಾಗಿದೆ.