ಯಾದಗಿರಿ: ಇಷ್ಟು ದಿನ ಕಲಬೆರಕೆ ಪೆಟ್ರೋಲ್ ದಂಧೆ ಜೋರಾಗಿ ನಡೆಯುತ್ತಿತ್ತು. ಆದರೆ ಇದೀಗ ಪೆಟ್ರೋಲ್ ಬಂಕ್ ಮಾಲೀಕನೊಬ್ಬ ಮತ್ತೊಂದು ಹೊಸ ಮೋಸಕ್ಕೆ ನಾಂದಿಯಾಡಿದ್ದಾನೆ.
ಹೌದು. ಇಷ್ಟು ದಿನ ಕದ್ದು ಮುಚ್ಚಿ ಲೀಟರ್ ನಲ್ಲಿ ಮೋಸ ಮಾಡಿ, ವಾಹನ ಸವಾರರ ಹಣೆಗೆ ತಿರುಪತಿ ನಾಮ ಹಾಕುತ್ತಿದ್ದ ಪೆಟ್ರೋಲ್ ಬಂಕ್ ಗಳು, ಈಗ ಹಾಡ ಹಗಲೇ ಹೊಸ ದಂಧೆ ಶುರುವಿಟ್ಟುಕೊಂಡಿವೆ. ಹಾಲಿಗೆ ನೀರು ಬೆರೆಸಿದಂತೆ ಯಾದಗಿರಿಯ ವಡಗೇರ ತಾಲೂಕಿನ ನಾಯ್ಕಲ್ ಗ್ರಾಮದ ಬಳಿಯ ಎಚ್ಪಿ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಬದಲಿಗೆ ನೀರೇ ಬಂದಿದೆ.
ಇಷ್ಟು ದಿನ ಎಗ್ಗಿಲ್ಲದೆ ನಡೆಯುತ್ತಿದ್ದ ಈ ಪೆಟ್ರೋಲ್ ದಂಧೆ ಇಂದು ಬಟಾಬಯಲಾಗಿದೆ. ಸ್ವತಃ ವಾಹನ ಸವಾರರೇ ಈ ಕರಾಳ ದಂಧೆಯನ್ನು ಬಯಲಿಗೆಳೆದಿದ್ದಾರೆ. ಯಾದಗಿರಿ ನಿವಾಸಿ ಮಂಜುನಾಥ್ ಎಂಬವರು ಸಂಜೆ ತಮ್ಮ ಕಾರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿದ್ದರು. ಬಳಿಕ ಸ್ವಲ್ಪ ದೂರ ತೆರಳುತಿದ್ದಂತೆಯೇ ಕಾರು ಇಂಜಿನ್ ಜಾಮ್ ಆಗಿದೆ. ಆಗ ಸ್ಥಳಕ್ಕೆ ಮೆಕಾನಿಕ್ ಕರೆಸಿ ಕಾರ್ ಚೆಕ್ ಮಾಡಿಸಿದಾಗ ಮೋಸ ಬಯಲಿಗೆ ಬಂದಿದೆ.
ಇದಿಷ್ಟೇ ಅಲ್ಲ, ಈ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿಕೊಂಡ 50ಕ್ಕೂ ಹೆಚ್ಚು ವಾಹನಗಳ ಕಥೆಯೂ ಇದೇ ಆಗಿದೆ. ಇದರಿಂದ ರೊಚ್ಚಿಗೆದ್ದ ಬೈಕ್ ಸವಾರರು, ಬಂಕ್ ಮಾಲೀಕನಿಗೆ ಚಳಿ ಬಿಡಿಸಿದ್ದಾರೆ. ವಾಹನಗಳ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.