ಬಾಗಲಕೋಟೆ: ಜಲಾವೃತವಾದ ಮನೆಯಿಂದ ಪಾತ್ರೆ ತರಲು ಹೋದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದಲ್ಲಿ ನಡೆದಿದೆ.
ಮಾಚಕನೂರು ಗ್ರಾಮದ ನಿವಾಸಿ ವಿಠ್ಠಲ ದೇವರಮನಿ (35) ಶುಕ್ರವಾರ ರಾತ್ರಿ ಘಟಪ್ರಭಾ ನದಿ ಪ್ರವಾಹದಿಂದ ಜಲಾವೃತವಾದ ತನ್ನ ಮನೆಯಿಂದ ಪಾತ್ರೆಗಳನ್ನು ತರಲು ಹೋಗಿ ಕಾಣೆಯಾಗಿದ್ದ ಎನ್ನಲಾಗಿದೆ. ಆದರೆ ವಿಠ್ಠಲ್ ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಪಾತ್ರೆ ತರಲು ಹೋದ ವಿಠ್ಠಲ್ ಒಂದು ದಿನವಾದರೂ ಬಾರದ ಹಿನ್ನೆಲೆಯಲ್ಲಿ ಅವರನ್ನು ಹುಡುಕಿಕೊಂಡು ಹೋಗಲಾಗಿದೆ. ಈ ವೇಳೆ ಶನಿವಾರ ವಿಠ್ಠಲ್ ಅವರ ಚಪ್ಪಲಿ, ಹಣ ಮತ್ತು ಬಟ್ಟೆ ಪತ್ತೆಯಾಗಿದ್ದವು. ಆದರೆ ಇಂದು ಅವರು ಶವವಾಗಿ ಪತ್ತೆಯಾಗಿದ್ದು, ಪ್ರವಾಹದ ನೀರಿನಲ್ಲಿ ಸಿಕ್ಕಿ ಮೃತ ಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹಕ್ಕೆ ಇದು ಮೂರನೇ ಬಲಿಯಾಗಿದ್ದು, ಮೃತನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.