ಉಡುಪಿ: ಜಿಲ್ಲೆಯಲ್ಲಿ ಮಳೆ ನೆರೆ ಸೃಷ್ಟಿಸಿದ್ದರೆ, ಬಿರುಗಾಳಿ ಅಟ್ಟಹಾಸ ಮೆರೆದಿದೆ. ಹೆಬ್ರಿ ತಾಲೂಕಿನ ಮುಟ್ಲುಪಾಡಿಯಲ್ಲಿ ಬೀಸಿದ ಬಿರುಗಾಳಿಗೆ 15 ಮನೆಗಳ ಚಾವಣಿ ಹಾರಿದೆ. 100 ಮನೆಗಳಿಗೆ, ತೋಟಕ್ಕೆ ಹಾನಿ ಉಂಟು ಮಾಡಿದೆ.
ಮುನಿಯಾಲು ಗ್ರಾಮದಲ್ಲಿ ಎದ್ದ ಬಿರುಗಾಳಿ ಮುಟ್ಲುಪಾಡಿ ಗ್ರಾಮದತ್ತ ಬೀಸಿದೆ. ಸುತ್ತಲಿನ ಅಡಿಕೆ, ತೆಂಗಿನ ತೋಟಗಳಿಗೆ ಹಾನಿಯಾಗಿದೆ. 100ಕ್ಕೂ ಹೆಚ್ಚು ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ. ಭತ್ತದ ಗದ್ದೆಗೂ ಬಿರುಗಾಳಿ ಹಾನಿಯುಂಟು ಮಾಡಿದೆ. ಮುಟ್ಲುಪಾಡಿಯ ಘಟನೆಯಲ್ಲೇ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಸ್ಥಳೀಯ ಶಾಸಕ ಸುನೀಲ್ ಕುಮಾರ್ ಬಿರುಗಾಳಿಗೆ ತುತ್ತಾದ ಮನೆಗಳು, ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮನೆ ರಿಪೇರಿಗೆ ಶೀಘ್ರ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗುವುದು. ಹೆಚ್ಚಿನ ಪರಿಹಾರಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸುವುದಾಗಿ ಹೇಳಿದರು.
ಅಲ್ಲದೆ ಜಿಲ್ಲೆಯ ಚೇರ್ಕಾಡಿ ಗ್ರಾಮದ ಬೆನಗಲ್ನಲ್ಲಿ ದನದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದ ವೇಳೆ ಮಣ್ಣಿನ ಗೋಡೆ ಕುಸಿದು ಮೈಮೇಲೆ ಬಿದ್ದ ಪರಿಣಾಮ 52 ವರ್ಷದ ಗಂಗಾ ಮರಕಾಲ ಎಂಬವರು ಮೃತಪಟ್ಟಿದ್ದಾರೆ.