ಮಂಡ್ಯ: ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷದ ಜೊತೆ ಸಂಬಂಧ ಮಾಡಿ ಅದರ ಸ್ಥಿತಿ ಹೀನಾಯವಾಗಿದೆ. ಕಾಂಗ್ರೆಸ್ ಪಕ್ಷ ಜೆಡಿಎಸ್ ಜೊತೆಗಿನ ಸಂಬಂಧ ಬಿಡದಿದ್ರೆ ಈಗ ಗೆದ್ದಿರುವ ಒಂದು ಸೀಟನ್ನು ಮುಂದೆ ಕಳೆದುಕೊಳ್ತಾರೆ ಎಂದು ಎಂಎಲ್ಸಿ ಸಂದೇಶ್ ನಾಗರಾಜ್ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭದಿಂದಲೂ ಸುಮಲತಾ ಗೆಲ್ಲುತ್ತಾರೆ ಎಂದು ನಮಗೆ ಗೊತ್ತಿತ್ತು. ಅದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ಕಡಿಮೆ ಎಂದರೂ ಒಂದು ಲಕ್ಷ ಮತಗಳಿಂದ ಗೆಲ್ಲುತ್ತಾರೆ ಎಂದು ಹೇಳಿದ್ದೆ. ಅವರು ಒಂದು ಲಕ್ಷಕ್ಕಿಂತ ಕಡಿಮೆ ಅಂತರದಿಂದ ಗೆದ್ದಿದ್ದರೆ ಸೋತ ಹಾಗೆ ಎಂದು ಅನ್ಕೊಂಡಿದ್ದೆ.
ಸಚಿವರೊಬ್ಬರು ನಿಖಿಲ್ ಎರಡೂವರೆ ಲಕ್ಷ ಮತಗಳಿಂದ ಗೆಲ್ಲುತ್ತಾರೆ. ನಿಖಿಲ್ ಸೋತರೆ ರಾಜಕೀಯ ನಿವೃತ್ತಿ ಅಥವಾ ಸನ್ಯಾಸತ್ವ ತೆಗೆದುಕೊಳ್ಳೋದಾಗಿ ಹೇಳಿದರು. ಅವರಿಗೆ ಇದನ್ನ ನೆನಪಿಸುತ್ತಿದ್ದೇನೆ. ಸಚಿವರು ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳುತ್ತಾರೋ? ಇಲ್ಲವೋ ಗೊತ್ತಿಲ್ಲ. ಮಂತ್ರಿಗಳು ಸುಳ್ಳು ಹೇಳಬಾರದು. ಇದು ರಾಜ್ಯದ ಜನತೆಗೆ ಸುಳ್ಳು ಹೇಳಿದ ಹಾಗೆ ಆಗುತ್ತದೆ ಎಂದು ಸಚಿವ ಪುಟ್ಟರಾಜು ರಾಜೀನಾಮೆಗೆ ಪರೋಕ್ಷವಾಗಿ ಆಗ್ರಹಿಸಿದರು.