ಹಾವೇರಿ: ಬಳ್ಳಾರಿಯ ಜಿಲ್ಲೆಯ ಶ್ರೀಕ್ಷೇತ್ರ ಮೈಲಾರದಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿರೂಪಕಿಯನ್ನು ತಳ್ಳಿ, ಏ ನಡಿಯಮ್ಮಾ. ನನಗೆ ಲೇಟ್ ಆಗುತ್ತೆ ಎಂದು ದರ್ಪ ಮೆರೆದಿದ್ದಾರೆ.
ಮೈಲಾರದಲ್ಲಿ ಇಂದು ಕನಕ ಗುರುಪೀಠದ ಏಳುಕೋಟಿ ಭಕ್ತರ ಕುಟೀರ ಉದ್ಘಾಟನಾ ಸಮಾರಂಭ ನಡೆದಿತ್ತು. ನಿರೂಪಕಿ ವಚನಗಳನ್ನು ಹೇಳುತ್ತಿದ್ದರು. ಈ ವೇಳೆ ವೇದಿಕೆ ಮೇಲಿದ್ದ ಸಿದ್ದರಾಮಯ್ಯ ಅವರು ನಿರೂಪಕಿಯನ್ನು ತಳ್ಳಿ ಭಾಷಣ ಆರಂಭಿಸಿದರು.
ಸಮಾವೇಶದಲ್ಲಿ ಸೇರಿದ್ದ ಜನರು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಕೂಗಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ, ಜನರ ಆಶೀರ್ವಾದ ಇದ್ದರೆ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ. ಖುರ್ಚಿ ಕೊಡುವರು ಹಾಗೂ ಅಲ್ಲಿಂದ ಕೆಳಗೆ ಇಳಿಸುವವರು ಜನರೇ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಸೋಲುವ ಕ್ಷೇತ್ರದಲ್ಲಿ ಹಿಂದುಳಿದವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಆರೋಪಿಸುತ್ತಾರೆ. ಆದರೆ ಮಾನಗೆಟ್ಟವರು, ನಾಚಿಕೆ ಬಿಟ್ಟವರು ಸೋಲುವ ಕಡೆ ಒಬ್ಬರಿಗಾದರೂ ಕೊಡಬೇಕಿತ್ತು. ನನ್ನ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ಗುಡುಗಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮದಿಂದ ನಿರ್ಗಮಿಸುವಾಗ ನಿರೂಪಕಿಯನ್ನು ಕರೆದು ತಪ್ಪಾಯಿತು. ನನಗೆ ತುಂಬಾ ತಡವಾಗುತ್ತದೆ ಎಂದು ಹೇಳಿ ಕ್ಷಮೆ ಕೇಳಿದರು.