ಬೆಳಗಾವಿ: ನಾಮಪತ್ರ ಹಿಂಪಡೆಯಲು ಸಂಸದ ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ರಾಜಣ್ಣ ಅವರು 3.5 ಕೋಟಿ ರೂ. ಪಡೆದಿದ್ದಾರೆ ಎಂಬ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಈ ವಿಚಾರದ ಬಗ್ಗೆ ಮಾತನಾಡಿ, ಕಾರ್ಯಕರ್ತ ದರ್ಶನ್ ಪುರಾವೆ ಇದ್ದರೆ ಹೇಳಬೇಕು. ಅನಾವಶ್ಯಕವಾಗಿ ಈ ರೀತಿ ಗೊಂದಲ ಮಾಡುತ್ತಿರುವುದು ಸರಿಯಲ್ಲ. ಮುದ್ದಹನುಮೇಗೌಡ, ರಾಜಣ್ಣನವರು ಹಣ ತೆಗೆದುಕೊಂಡು ಪಕ್ಷದ ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲ. ಅವರು ಬಹಳ ವರ್ಷಗಳಿಂದ ಪಕ್ಷದಲ್ಲಿ ದುಡಿಯುವ ಮೂಲಕ ಸ್ಥಾನ-ಮಾನ ಗಳಿಸಿದ್ದಾರೆ. ಹೀಗಾಗಿ ಅಂಥದ್ದೆಲ್ಲ ಯಾವುದು ಸಾಧ್ಯವಿಲ್ಲ ಅಂದ್ರು. ಇದನ್ನೂ ಓದಿ:ನಾಮಪತ್ರ ವಾಪಸ್ ಪಡೆಯಲು 3.5 ಕೋಟಿ ರೂ. ಪಡೆದ್ರಾ ಮುದ್ದಹನುಮೇಗೌಡ?
ಇದೇ ವೇಳೆ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 132 ವರ್ಷ ಇಂತಹ ಏಳು-ಬೀಳು ನೋಡಿಕೊಂಡು ಕಾಂಗ್ರೆಸ್ ಪಕ್ಷ ಬಂದಿದೆ. ವ್ಯಕ್ತಿಗತವಾಗಿ ಯಾರಾದರೂ ಪಕ್ಷದ ಬಗ್ಗೆ ನಾನೇನು ಮಾಡಿ ಬಿಡುತ್ತೇನೆ ಎಂದು ಕಲ್ಪನೆ ಇಟ್ಟುಕೊಂಡಿದ್ದರೆ ಅದು ಸಾಧ್ಯವಿಲ್ಲ. ನನ್ನಂತವರು ಸಾಕಷ್ಟು ಜನ ಬಂದು ಹೋಗಿರುತ್ತಾರೆ ಎಂದು ಹೇಳುವ ಮೂಲಕ ನೇರವಾಗಿ ರಮೇಶ್ಗೆ ಟಾಂಗ್ ಕೊಟ್ಟರು. ನಮ್ಮ ವೈಯಕ್ತಿಕ ವಿಚಾರಗಳನ್ನ ಪಕ್ಷದಲ್ಲಿ ತರುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: 3.5 ಕೋಟಿ ರೂ. ಹಣ ಡೀಲ್ ವಿಚಾರ- ಮುದ್ದಹನುಮೇಗೌಡ ಸ್ಪಷ್ಟನೆ
ಡಾ.ಜಿ ಪರಮೇಶ್ವಶ್ ಸಿಎಂ ಆಗ್ತಾರೆ ಎನ್ನುವ ವಿಚಾರದ ಕುರಿತು ಮಾತನಾಡಿದ ಅವರು, ನಮ್ಮಲ್ಲಿ ಮುಖ್ಯಮಂತ್ರಿ ಸ್ಥಾನ ತೀರ್ಮಾನ ಮಾಡುವುದು ಹೈಕಮಾಂಡ್. ಯಾರಿಗೆ ಸಾಮಥ್ರ್ಯ ಇದೆ, ಅನುಭವ ಇರುತ್ತೆ, ರಾಜ್ಯದ ಆಡಳಿತ ನಡೆಸುತ್ತಾರೆ ಅನ್ನೋದನ್ನು ಶಾಸಕರ ಅಭಿಪ್ರಾಯ ತಗೊಂಡು ಸಿಎಲ್ಪಿಯಲ್ಲಿ ತೀರ್ಮಾನ ಮಾಡುತ್ತಾರೆ. ಆ ನಂತರ ಹೈಕಮಾಂಡ್ ಸಿಎಂ ಸ್ಥಾನದ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.