– ಶಾಸಕರಿಗೆ ಬುದ್ಧಿ ಕಲಿಸುತ್ತೇವೆ ಎಂದ ಗ್ರಾಮಸ್ಥರು
ದಾವಣಗೆರೆ: ನೀವೇನು ವೋಟ್ ಹಾಕದಿದ್ದರೆ ಪ್ರಪಂಚ ಮುಳುಗಿ ಹೋಗಲ್ಲ ಎಂದು ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ತಮ್ಮ ಕ್ಷೇತ್ರದ ಎನ್.ಬಸವನಹಳ್ಳಿ ಗ್ರಾಮಸ್ಥರ ಮೇಲೆ ದರ್ಪ ಮೆರೆದಿದ್ದಾರೆ.
ಮೂಲ ಸೌಕರ್ಯ ಒದಗಿಸದ ಹಿನ್ನಲೆಯಲ್ಲಿ ಮಂಗಳವಾರ ನಡೆದ ಲೋಕಸಭಾ ಚುನಾವಣಾ ಮತದಾನವನ್ನು ಎನ್.ಬಸವನಹಳ್ಳಿ ಗ್ರಾಮಸ್ಥರು ಬಹಿಷ್ಕರಿಸಿದ್ದರು. ಇಂದು ಗ್ರಾಮಸ್ಥರ ಮನವೊಲಿಸಲು ಬಂದಿದ್ದಾಗ ಶಾಸಕರು ದರ್ಪ ಮೆರೆದಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿಯೇ ಇದ್ದ ಕೆಲವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ಓದಿ: 387 ಮತದಾರರಿರುವ ಗ್ರಾಮದಲ್ಲಿ ಒಂದೇ ಮತ ಚಲಾವಣೆ
ಶಾಸಕರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನು ನೋಡಿದ ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಸರಿಯಾಗಿ ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಎನ್.ಬಸವನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಕುಸಿದು ಬಿದ್ದಿದೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುವಂತಾಗಿದ್ದು, ಇಂತ ಕಟ್ಟಡದಲ್ಲಿಯೇ ಮಕ್ಕಳಿಗೆ ಬಿಸಿಯೂಟದ ತಯಾರಿಸಿ ಕೊಡಲಾಗುತ್ತಿದೆ. ಈ ಕುರಿತು ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅವರು ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಗ್ರಾಮದ ಯುವಕ ಆರೋಪಿಸಿದ್ದಾನೆ.