ಮಂಡ್ಯ: ಹೈವೋಲ್ಟೇಜ್ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಮತದಾನಕ್ಕೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಮತದಾನದ ಕೊನೆ ದಿನದಲ್ಲಿ ಸಕ್ಕರೆ ನಾಡಲ್ಲಿ ಕೋಟಿ ಕೋಟಿ ಹಣದ ಹೊಳೆ ಹರಿಯುವ ಸಾಧ್ಯತೆ ಇದೆ ಎನ್ನುವ ಸುದ್ದಿಯ ಬೆನ್ನಲ್ಲೇ ಚುನಾವಣಾ ಆಯೋಗ ಹಿಂದೆಂದಿಗಿಂತಲೂ ಹದ್ದಿನ ಕಣ್ಣಿಟ್ಟಿದ್ದು, ಸೆಕ್ಯೂರಿಟಿ ಫುಲ್ ಟೈಟ್ ಆಗಿದೆ.
ಸಕ್ಕರೆ ನಾಡು ಮಂಡ್ಯ ಕಳೆದ ಎರಡು ತಿಂಗಳಿನಿಂದ ಇಡೀ ರಾಜ್ಯದ ಜನರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆದಿಟ್ಟುಕೊಂಡಿದೆ. ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ನಡುವಿನ ಚುನಾವಣಾ ಕಾಳಗದಲ್ಲಿ ಮತದಾನಕ್ಕೆ ಉಳಿದಿರುವುದು ಇನ್ನು ಕೇವಲ ಮೂರು ದಿನಗಳು ಮಾತ್ರ. ಈ ನಿಟ್ಟಿನಲ್ಲಿ ಎರಡು ಅಭ್ಯರ್ಥಿಗಳ ಕಡೆಯಿಂದ ಕೋಟಿ ಕೋಟಿ ಹಣದ ಹೊಳೆ ಹರಿಯಲಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ನಿಟ್ಟಿನಲ್ಲಿ ಹಣದ ಹೊಳೆಯನ್ನು ತಡೆಗಟ್ಟಲು ಚುನಾವಣಾ ಆಯೋಗದ ಜೊತೆಗೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಚೆಕ್ ಪೋಸ್ಟ್ ಗಳಲ್ಲೂ ವಾಹನಗಳ ತಪಾಸಣೆ ನಿರಂತರವಾಗಿ ನಡೆಯುತ್ತಿದೆ. ಇತ್ತೀಚೆಗೆ ಸಂಸದ ಎಲ್.ಆರ್ ಶಿವರಾಮೇಗೌಡ ಪುತ್ರ ಚೇತನ್ ಗೌಡ ಜೆಡಿಎಸ್ ನಿಂದ 150 ಕೋಟಿ ರೂ ಹಣ ಖರ್ಚು ಮಾಡಲಾಗುವುದು ಎಂಬ ಆಡಿಯೋ ಭಾರೀ ವೈರಲ್ ಆಗಿತ್ತು. ಈ ನಿಟ್ಟಿನಲ್ಲಿ ಪ್ರತಿ ಕಡೆಯಲ್ಲೂ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಮುಂದಾಗಿದೆ.
ಮಂಡ್ಯ ರಣಕಣದಲ್ಲಿ ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಅಭ್ಯರ್ಥಿಗಳು ಹಣದ ಹೊಳೆಯನ್ನೇ ಹರಿಸುತ್ತಾರೆ ಎಂಬ ಚರ್ಚೆ ಆರಂಭದಿಂದಲೂ ಜೋರಾಗಿಯೇ ಇದೆ. ಈ ಎಲ್ಲ ಚರ್ಚೆಗಳನ್ನು ಚುನಾವಣಾ ಆಯೋಗ ಸುಳ್ಳು ಮಾಡಿ ನ್ಯಾಯ ಸಮ್ಮತ ಚುನಾವಣೆ ನಡೆಸುವಲ್ಲಿ ಸಕ್ಸಸ್ ಆಗಬೇಕಿದೆ.