ಬಾಗಲಕೋಟೆ: ಈಜಲು ಹೋದ ಮೂವರು ಯುವಕರಲ್ಲಿ ಓರ್ವ ಮೊಸಳೆ ಬಾಯಿಗೆ ಸಿಲುಕಿ ಬಲಿಯಾದ ಘಟನೆ ಬಾಗಲಕೋಟೆ ತಾಲೂಕಿನ ಛಬ್ಬಿ ಗ್ರಾಮದ ಘಟಪ್ರಭಾ ನದಿಯಲ್ಲಿ ನಡೆದಿದೆ.
ಛಬ್ಬಿ ಗ್ರಾಮದ ಸಿದ್ರಾಮಪ್ಪ ಪೂಜಾರಿ (18) ಮೊಸಳೆಗೆ ಬಲಿಯಾದ ಯುವಕ. ಅದೃಷ್ಟವಶಾತ್ ಸಿದ್ರಾಮಪ್ಪನ ಜೊತೆಗೆ ಈಜಲು ಹೋಗಿದ್ದ ಇಬ್ಬರು ಬದುಕುಳಿದು ಬಂದಿದ್ದಾರೆ.
ಸಿದ್ರಾಮಪ್ಪ ಹಾಗೂ ಇಬ್ಬರು ಯುವಕರು ಘಟಪ್ರಭಾ ನದಿಯಲ್ಲಿ ಈಜಲು ಇಂದು ಹೋಗಿದ್ದರು. ಈ ವೇಳೆ ಮೊಸಳೆ ದಾಳಿ ಮಾಡಿದ್ದು, ಸಿದ್ರಾಮಪ್ಪನನ್ನು ನದಿಯಲ್ಲಿ ಎಳೆದುಕೊಂಡು ಹೋಗಿದೆ. ಇದನ್ನು ನೋಡಿದ ಮತ್ತಿಬ್ಬರು ಯುವಕರು ಭಯಗೊಂಡು, ಈಜಿ ಸುರಕ್ಷಿತವಾಗಿ ದಡ ಸೇರಿದ್ದಾರೆ.
ಈ ಕುರಿತು ಯುವಕರು, ಸ್ಥಳೀಯರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಈಜು ತಜ್ಞರು ಸಿದ್ರಾಮಪ್ಪನ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಪಿ.ಸಿ.ಗದ್ದೀಗೌಡರ್, ಮಾಜಿ ಶಾಸಕ ಪಿ.ಎಚ್. ಪೂಜಾರ್ ಭೇಟಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.