ಬೆಂಗಳೂರು: ಮಂಡ್ಯದಲ್ಲಿ ಬಿರುಸಿನಿಂದ ಪ್ರಚಾರ ಮಾಡುತ್ತಿದ್ದ ಮೈತ್ರಿ ಸರ್ಕಾರದ ಅಭ್ಯರ್ಥಿ ನಿಖಿಲ್ ಕೊಂಚ ರಿಲ್ಯಾಕ್ಸ್ ತೆಗೆದುಕೊಂಡಿದ್ದು, ಇಂದು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಚಾರವನ್ನು ಕ್ಯಾನ್ಸಲ್ ಮಾಡಿದ್ದಾರೆ.
ಸಮಸ್ತ ನಾಡಿದ್ಯಂತ ಎಲ್ಲರೂ ಇಂದು ಯುಗಾದಿ ಹಬ್ಬವನ್ನು ಕುಟುಂಬಸ್ಥರೊಂದಿಗೆ ಸಡಗರ-ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಕುಟುಂಬದವರ ಜೊತೆ ಹಬ್ಬ ಆಚರಿಸಲು ಮಂಡ್ಯದಲ್ಲಿ ಇಂದಿನ ಪ್ರಚಾರವನ್ನು ರದ್ದು ಮಾಡಿ ಬೆಂಗಳೂರಿಗೆ ಬಂದಿದ್ದಾರೆ.
ಹಬ್ಬ ಆಚರಿಸಲು ನಿಖಿಲ್ ಪ್ರಚಾರ ರದ್ದು ಮಾಡಿದ್ದರೆ, ಇತ್ತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಹಬ್ಬದ ದಿನವೂ ಮಂಡ್ಯದ ಅನೇಕ ಭಾಗಗಳಲ್ಲಿ ಪ್ರಚಾರ ಮುಂದುವರಿಸಿದ್ದಾರೆ. ನಿಖಿಲ್ ನಾಮಪತ್ರ ಸಲ್ಲಿಸಿದ ದಿನದಿಂದಲೂ ಮಂಡ್ಯದಲ್ಲಿ ಬಿಡುವಿಲ್ಲದೇ ಪ್ರಚಾರ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಪ್ರಚಾರಕ್ಕೆ ಬರುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಿದ್ದಾರೆ. ಸಾರ್ ನೀವು ಪ್ರಚಾರಕ್ಕೆ ಬನ್ನಿ. ನಿಮ್ಮ ಆಶೀರ್ವಾದ ನನಗೆ ಬೇಕು. ಹಿಂದಿನದ್ದು ಬಿಟ್ಟು ಬಿಡಿ, ನಾನು ಭವಿಷ್ಯದ ಬಗ್ಗೆ ಯೋಜನೆ ಮಾಡುವವನು. ಹೀಗಾಗಿ ಮುನಿಸು ಮರೆತು ಪ್ರಚಾರಕ್ಕೆ ಬನ್ನಿ ಎಂದು ನಿಖಿಲ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.