ಬೆಂಗಳೂರು: ಲೋಕಸಭಾ ಚುನಾವಣಾ ಕಾವು ರಂಗೇರುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ಕುರುಡು ಕಾಂಚಾಣ ಜೋರಾಗಿಯೇ ಕುಣಿಯುತ್ತಿದೆ ಎನ್ನುವ ಅನುಮಾನಗಳು ಹುಟ್ಟು ಹಾಕಿದೆ. ಇದಕ್ಕೆ ಪೂರಕವೆಂಬಂತೆ ದಾಖಲೆ ಇಲ್ಲದ 45 ಲಕ್ಷ ರೂ. ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.
ವ್ಯಕ್ತಿಯೊಬ್ಬ ಡಿಯೋ ಬೈಕಿನಲ್ಲಿ ಬೆಳಗ್ಗೆ ಅನುಮಾಸ್ಪದವಾಗಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ಪಕ್ಕದಲ್ಲಿ ಸುತ್ತಾಡುತ್ತಿದ್ದನು. ಈ ವೇಳೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬೈಕ್ ತಡೆದು ಪರಿಶೀಲನೆ ನಡೆಸಿದ್ದು, ಡಿಯೋ ಬೈಕಿನಲ್ಲಿ ಹಣದ ಬ್ಯಾಗ್ ಸಿಕ್ಕಿದೆ. ಕೂಡಲೇ ಹಣದೊಂದಿಗೆ ವ್ಯಕ್ತಿಯನ್ನೂ ಠಾಣೆಗೆ ಕರೆದೊಯ್ದು ತನಿಖೆ ಮಾಡಿದಾಗ ಹೆಸರು ರಾಹುಲ್ ಎಂದು ಹೇಳಿದ್ದು, ಹಣವನ್ನು ಸಾಲ ಪಡೆದಿರುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾನೆ.
ಇದರಿಂದ ಪೊಲೀಸರಿಗೆ ಮತ್ತಷ್ಟು ಅನುಮಾನ ಬಂದು ಆತನನ್ನನು ತೀವ್ರ ವಿಚಾರಣೆಗೆ ಒಳಪಡಿಸಿದ್ರು. ಈ ಸಂದರ್ಭದಲ್ಲಿ ಚಿಕ್ಕಪೇಟೆಯಲ್ಲಿರುವ ಎಸ್.ಎಸ್ ಚಿನ್ನಾಭರಣ ಮಾಲೀಕ ಸಚಿನ್ಗೆ ಸೇರಿದ ಹಣವೆಂದು ಹೇಳಿದ್ದಾನೆ. ಮತ್ತೊಮ್ಮೆ ರಾಹುಲ್, ಅಕ್ಷಯ ತೃತಿಯ ಇದ್ದ ಕಾರಣ ಸಾಲವಾಗಿ ಹಣ ಪಡೆದುಕೊಂಡು ಬಂದಿದ್ದಾಗಿ ಹೇಳಿಕೆ ನೀಡುತ್ತಿದ್ದಾನೆ. ರಾಹುಲ್ ವಿಭಿನ್ನ ಹೇಳಿಕೆಯಿಂದ ಗೊಂದಲಕ್ಕೀಡಾಗಿರುವ ಪೊಲೀಸರು 45 ಲಕ್ಷ ಹಣ ರಹಸ್ಯ ತಿಳಿದುಕೊಳ್ಳಲು ಮುಂದಾಗಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ಪೊಲೀಸರು 45 ಲಕ್ಷ ರೂ. ಹಣದ ವೈಟ್ ಮನಿನೊ ಬ್ಲಾಕ್ ಮನಿ ಎಂಬುದನ್ನು ತಿಳಿಲು ಐಟಿ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ಜೊತೆಗೆ ಹಣದ ಬಗ್ಗೆ ಚುನಾವಣಾ ಸ್ಕೊಡ್ ಕೂಡ ಪರಿಶೀಲನೆ ಮಾಡಿದ್ದಾರೆ.