– ಪ್ರಕರಣ ದಾಖಲಾಗಿದ್ದರೂ ಆರೋಪಿಳನ್ನು ಬಂಧಿಸದ ಪೊಲೀಸರು
ಬೆಂಗಳೂರು: ಸಾಲಕ್ಕೆ ಸಿಗರೇಟ್ ಕೊಡಲ್ಲ ಅಂತ ಹೇಳಿದ ಯುವಕನೊಬ್ಬನ ಮೇಲೆ ಪುಂಡರ ಗ್ಯಾಂಗ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ನಗರ ಹೊರವಲಯದ ಕೆ.ಆರ್.ಪುರದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕುಂದಾಪುರ ಮೂಲದ ಅಭಿನವ್ ಹಲ್ಲೆಗೆ ಒಳಗಾದ ಯುವಕ. ಕೆ.ಆರ್.ಪುರದ ಸೆಂಟ್ ಅಂತೋನಿ ಸ್ಕೂಲ್ ರಸ್ತೆಯಲ್ಲಿರುವ ಬೇಕರಿಯಲ್ಲಿ ಅಭಿನವ್ ಕೆಲಸ ಮಾಡುತ್ತಿದ್ದ. ಘಟನೆಯು ಕಳೆದ ಶನಿವಾರ ಸಂಜೆ ಸುಮಾರು 8 ರಿಂದ 10 ಜನ ದುಷ್ಕರ್ಮಿಗಳ ತಂಡ ಹಲ್ಲೆ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದರೂ ಪೊಲೀಸರು ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆಯ ವಿವರ:
ಭರತ್ ಅಂಡ್ ಟೀಂ ಕಳೆದ ಶನಿವಾರ ಸೆಂಟ್ ಅಂತೋನಿ ಸ್ಕೂಲ್ ರಸ್ತೆಯಲ್ಲಿರುವ ಬೇಕರಿಗೆ ಹೋಗಿದ್ದಾರೆ. ಸಾಲವಾಗಿ ಸಿಗರೇಟ್ ನೀಡುವಂತೆ ಕೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಅಭಿನವ್ ಕೊಡುವುದಿಲ್ಲವೆಂದು ಹೇಳಿದ್ದಾರೆ. ಇದರಿಂದಾಗಿ ಕೋಪಗೊಂಡ ಭರತ್ ಅಂಡ್ ಟೀಂ ಬೇಕರಿಗೆ ನುಗ್ಗಿ ಗ್ಲಾಸು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಪುಡಿಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಭಿನವ್ ಮೇಲೂ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಹಲ್ಲೆಯ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದ ಯುವಕನಿಗೂ ಭರತ್ ಅಂಡ್ ಟೀಂ ಬೆದರಿಕೆ ಹಾಕಿದ್ದಾರೆ. ವಿಡಿಯೋ ಮಾಡಿದ್ರೆ ಕೈ ಕತ್ತರಿಸಿಯೇ ಜೈಲಿಗೆ ಹೋಗ್ತಿನಿ ಎಂದು ಅವಾಜ್ ಹಾಕಿದ್ದಾರೆ. ಇದರಿಂದಾಗಿ ಹೆದರಿದ ಯುವಕ ವಿಡಿಯೋ ಮಾಡುವುದನ್ನು ನಿಲ್ಲಿಸಿದ್ದಾನೆ.
ಹಲ್ಲೆ ಮಾಡಿದ ಆರೋಪಿಗಳು ಸ್ಥಳೀಯ ನಿವಾಸಿಗಳು ಎನ್ನಲಾಗಿದ್ದು, ಈ ಕುರಿತು ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸದೆ ಕಾಲ ಕಳೆಯುತ್ತಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳು ಏನು ನಡೆದಿಲ್ಲ ಎನ್ನುವಂತೆ ಇದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv