ಮಂಗಳೂರು: ನಗರ ಏರ್ ಪೋರ್ಟ್ ಪಾರ್ಕಿಂಗ್ನಲ್ಲಿ ಕ್ಷುಲ್ಲಕ ಕಾರಣಕ್ಕೆ ಓಲಾ ಕ್ಯಾಬ್ ಹಾಗೂ ಸ್ಥಳೀಯ ಕಾರು ಚಾಲಕರ ಮಧ್ಯೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಓಲಾ ಕ್ಯಾಬ್ ಒಂದನ್ನು ಕಲ್ಲು ತೂರಿ ಜಖಂ ಗೊಳಿಸಲಾಗಿದೆ.
ಪ್ರಯಾಣಿಕರನ್ನು ಕರೆದೊಯ್ದಿದ್ದ ಓಲಾ ಕ್ಯಾಬ್ ಚಾಲಕ ತನ್ನ ಕಾರನ್ನು ಏರ್ ಪೋರ್ಟ್ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ. ಇದನ್ನು ಸ್ಥಳೀಯ ಕಾರು ಚಾಲಕರು ಆಕ್ಷೇಪಿಸಿದ್ದು, ಕೂಡಲೇ ಕಾರು ತೆರವು ಮಾಡುವಂತೆ ಸೂಚನೆ ನೀಡಿದ್ದರು. ಆದರೆ ಓಲಾ ಕಾರು ಚಾಲಕ ಸ್ಥಳೀಯರೊಂದಿಗೆ ವಾಗ್ವಾದ ನಡೆಸಿ, ತನ್ನ ಸಹವರ್ತಿಗಳನ್ನು ಕರೆಸಿದ್ದಾನೆ. ಆ ಬಳಿಕ ಸ್ಥಳೀಯ ಕ್ಯಾಬ್ ಚಾಲಕರು ಮತ್ತು ಓಲಾ ಸಿಬ್ಬಂದಿ ನಡುವೆ ಬೀದಿ ಕಾಳಗವೇ ನಡೆದು ಹೋಗಿದೆ. ಜಗಳದ ನಡುವೆ ಓಲಾ ಕ್ಯಾಬ್ ಮೇಲೆ ಕಲ್ಲು ತೂರಿ ಜಖಂ ಗೊಳಿಸಲಾಗಿದೆ. ಅಷ್ಟೇ ಅಲ್ಲದೆ ಘಟನೆಯಲ್ಲಿ ಓಲಾ ಕ್ಯಾಬ್ ಚಾಲಕನೊಬ್ಬನಿಗೆ ಗಂಭೀರ ಗಾಯವಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಏರ್ ಪೋರ್ಟ್ ಆವರಣದಿಂದ ಪ್ರಯಾಣಿಕರನ್ನು ಕರೆದೊಯ್ಯಲು ಸ್ಥಳೀಯ ಕಾರು ಚಾಲಕರ ನಡುವೆ ಪೈಪೋಟಿ ಇರುವುದರಿಂದ ಓಲಾ ಕ್ಯಾಬ್ಗಳಿಗೆ ಅವಕಾಶ ನೀಡುತ್ತಿರಲಿಲ್ಲ. ಓಲಾ ಟ್ಯಾಕ್ಸಿಯಂತಹ ಆನ್ ಲೈನ್ ಕ್ಯಾಬ್ ಗಳು ಕಡಿಮೆ ಬಾಡಿಗೆ ದರದಲ್ಲಿ ಮಂಗಳೂರು ನಗರ ತಲುಪಿಸುವ ಕಾರಣ ಈ ಹಿಂದೆಯೂ ಜಟಾಪಟಿ ನಡೆದಿತ್ತು. ಈ ವಿಚಾರ ಹಲವು ಸಮಯದಿಂದ ಹೊಗೆಯಾಡುತ್ತಿದ್ದು ಈಗ ಗೂಂಡಾಗಿರಿ ನಡೆಸುವಷ್ಟರ ಮಟ್ಟಿಗೆ ಮುಂದುವರೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv