ಬೆಂಗಳೂರು: ಸಿಲಿಕಾನ್ ಸಿಟಿಯ ಯುವಕನೊಬ್ಬ ತನ್ನ ಸಾಧನೆಯ ಮೂಲಕ ಇತರರಿಗೆ ಮಾರ್ಗದರ್ಶಿಯಾಗಿದ್ದು, ಮೊಟ್ಟೆಯಲ್ಲಿ ಕಲಾಕೃತಿಗಳನ್ನು ಮಾಡಿದ್ದಾರೆ.
ಮಲ್ಲೇಶ್ವರಂನ ನಿವಾಸಿಯಾದ ಅಭಿಷೇಕ್ ಅವರು ಕೈಯಿಂದ ವಿಶಿಷ್ಟ ಹಾಗೂ ವಿಭಿನ್ನವಾಗಿ ಮೊಟ್ಟೆಗಳ ಕಲಾಕೃತಿಗಳ ಸಾಧನೆ ಮಾಡಿದ್ದಾರೆ. ಚಿಕ್ಕವಯಸ್ಸಿನಿಂದಲೇ ಇವರ ತಂದೆ ಮಾಡುತ್ತಿದ್ದ ಕೊಬ್ಬರಿಯ ಕಲೆಯನ್ನ ನೋಡಿ ಬೆಳೆದವರು. ತಾನೂ ಕೂಡ ಅಪ್ಪನಂತೆ ಕಲೆಯಲ್ಲಿ ತೊಡಗಿಸಿಕೊಳ್ಳಬೇಕು ಅಂತ ನಿರ್ಧಾರ ಮಾಡಿದ್ದರು.
ನಾನು ತಂದೆಗಿಂತಲೂ ವಿಭಿನ್ನವಾಗಿ ಕಲೆಯಲ್ಲಿ ಸಾಧನೆ ಮಾಡಬೇಕು ಅಂತ ಯೋಚನೆ ಮಾಡಿದ್ದೆ. ಅದೇ ರೀತಿ ಕೋಳಿ ಮೊಟ್ಟೆಯನ್ನೇ ಸ್ಪೂರ್ತಿಯಾಗಿಸಿಕೊಂಡು ನಾನು ಕಳೆದ 2 ವರ್ಷಗಳಿಂದ ಮೊಟ್ಟೆಯ ಸಿಪ್ಪೆಗಳಿಗೆ ಜೀವ ತುಂಬುತ್ತಿದ್ದೇನೆ. ಇದುವರೆಗೂ ಸುಮಾರು 60ಕ್ಕೂ ಹೆಚ್ಚು ಮೊಟ್ಟೆಯ ಸಿಪ್ಪೆಗಳಿಗೆ ಅದ್ಭುತ ರೂಪವನ್ನ ನೀಡಿದ್ದೇನೆ. ಕಲೆಗೆ ಹಾಗೂ ಕಲಾವಿದರಿಗೆ ಜಾತಿ ಹಾಗೂ ಮತದ ಬಂಧನವಿಲ್ಲ ಎಂದು ಕಲಾವಿದ ಅಭಿಷೇಕ್ ಹೇಳಿದ್ದಾರೆ.
ಸಾಧಿಸುವ ಭರದಲ್ಲಿ ಅಭಿಷೇಕ್ ಮನೆಗೆ ಕೆ.ಜಿ ಗಟ್ಟಲೇ ಮೊಟ್ಟೆಯನ್ನ ತಂದಿಟ್ಟಿದ್ದನು. ನಾವು ಮೊದಲೇ ಬ್ರಾಹ್ಮಣರು, ಮನೇಲಿ ಮೊಟ್ಟೆ ತಂದರೆ ಜನ ಏನು ಅಂದುಕೊಳ್ತಾರೆ. ಮೊದಲು ಅದನ್ನು ಹೊರಗೆ ಹಾಕು ಇಲ್ಲಾಂದರೆ ನಿನ್ನನ್ನ ನಾವು ಹೊರಗೆ ಹಾಕುತ್ತೀವಿ ಅಂತ ಹೇಳಿದ್ದೆವು. ಆದರೆ ದಿನ ಕಳೆದಂತೆ ಅವರ ಕಲೆಯನ್ನ ನೋಡಿದ ನಾವು ಪ್ರೋತ್ಸಾಹ ನೀಡಿದೆವು ಎಂದು ಅಭಿಷೇಕ್ ತಂದೆ ಪ್ರಕಾಶ್ ಅವರು ಹೇಳಿದ್ದಾರೆ.
ಯಾವುದೇ ಕೆಲಸವನ್ನ ಕಷ್ಟಪಟ್ಟು ಮಾಡುವುದಕ್ಕಿಂತ ಇಷ್ಟಪಟ್ಟು ಮಾಡಿದರೆ ಯಶಸ್ಸು ಸಾಧಿಸಬಹುದು. ಇನ್ನು ಅಭಿಷೇಕ್ ಮುಂದೊಂದು ದಿನ ಅವರು ಮಾಡಿದ ಕಲಾಕೃತಿಗಳನ್ನ ಪ್ರದರ್ಶಿಸುವ ಆಸೆಯನ್ನ ಹೊಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv