#MeToo ಬಗ್ಗೆ ನಟ ಕಿಶೋರ್ ಮನದ ಮಾತು

Public TV
6 Min Read
Kishore Kumar arjun sruthi

ಬೆಂಗಳೂರು: ನಟಿ ಶೃತಿ ಹರಿಹರನ್, ಅರ್ಜುನ್ ಸರ್ಜಾ ಮೀಟೂ ವಿಚಾರವಾಗಿ ಬಹುಭಾಷಾ ನಟ ಕಿಶೋರ್ ಫೇಸ್‍ಬುಕ್‍ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಜನರ ಪ್ರೀತಿ ಮತ್ತು ಗೌರವ ಸಂಪಾದಿಸಿರುವ ಅರ್ಜುನ್ ಸರ್ಜಾ ಜೊತೆ ಕೆಲಸ ಮಾಡಿ, ಊಟ ಹಂಚಿಕೊಂಡಿದ್ದೇನೆ. ಅವರು ನನ್ನ ಮನಸಿಗೆ ತುಂಬಾ ಹತ್ತಿರದವರು ಎಂದು ಭಾವಿಸಿದ್ದು, ಸರ್ಜಾ ಮೇಲೆ ಕೇಳಿ ಬರುತ್ತಿರುವ ಆರೋಪಗಳು ನಿಜ ಎಂದು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಶೃತಿ ತೇಜೋವಧೆ ಮಾಡಲಾಗುತ್ತಿದೆ ಎಂದು ದೂರಿರುವ ಕಿಶೋರ್, ಯುವಜನತೆಯ ಮಾತುಗಳು ಮನಸ್ಸಿಗೆ ಬೇಸರ ತಂದಿದೆ. ಹೆಣ್ಣಿನ ಚಾರಿತ್ರೆ ವಧೆ ಮಾಡೋದು ತಪ್ಪು. ಸಿನಿಮಾ ಹೊಲಸು ಎಂಬ ಮನೋಭಾವನೆಯನ್ನ ದೂರ ಮಾಡುವಂತಾಗಬೇಕು. ರಾಜಣ್ಣನಂತ ತಂದೆ ಪಾರ್ವತಮ್ಮನಂತ ತಾಯಿ ವಿಷ್ಣುವರ್ಧನ್ ಅಂತಹ ಅಣ್ಣನಿದ್ದಾಗ ಇಂತಾ ಅದೇಷ್ಟೋ ಸಮಸ್ಯೆಗಳು ಸಮಸ್ಯೆ ಆಗುವ ಮುನ್ನವೇ ತೊಳೆದು ಹಾಕಿರುವ ಉದಾಹರಣೆಯನ್ನ ಕೇಳಿದ್ದೆ ಎಂದು ಮೀಟೂ ಆರೋಪದ ಬಗ್ಗೆ ವಿಸ್ತಾರವಾಗಿ ಮನದಾಳದ ಮಾತುಗಳನ್ನ ಹೇಳಿದ್ದಾರೆ.

Sruthi Arjun 1 1024x442 1 e1540641173583

ಕಿಶೋರ್ ಫೇಸ್‍ಬುಕ್ ಪೋಸ್ಟ್ ಇಂತಿದೆ:
ನನ್ನ ಮತ್ತು ಮೀಟೂವಿನ ನಡುವೆ ಹರಿದು ಹಂಚಿಹೋದ ಹೃದಯ. ಒಂದೆರಡು ದಿನಗಳ ಹಿಂದೆ ಪ್ರಸ್ತುತ ವಿದ್ಯಮಾನಗಳಿಗೆ ನಾನು ತಟಸ್ಥ ವೀಕ್ಷಕನಾಗಿದ್ದೆ. ಶೋಷಣೆಯ ಸಮಸ್ಯೆ ಯಾವುದೋ ಒಂದು ಉದ್ಯಮ ಅಥವಾ ಕೆಲಸದ ಸ್ಥಳದಲ್ಲಿ ಮಾತ್ರವಲ್ಲ ಬೇರೆ ಬೇರೆ ಹಂತಗಳಲ್ಲಿ ಮತ್ತು ಬೇರೆ ಬೇರೆ ರೂಪಗಳಲ್ಲಿ ಎಲ್ಲೆಡೆಯಲ್ಲೂ ಇದ್ದೇ ಇದೆ. ಸಿನಿಮಾ ಜನಪ್ರಿಯ ಸಾರ್ವಜನಿಕ ಮಾಧ್ಯಮವಾಗಿದ್ದರಿಂದ ಇಲ್ಲಿ ದನಿ ದೊಡ್ಡದಾಗಿ ಕೇಳುತ್ತಿದೆ. ಈ ಅಭಿಯಾನ ನನ್ನ ವೃತ್ತಿಯ ಹಲವು ಮಹಿಳೆಯರ ಭಾವನೆಗಳ ಅಭಿವ್ಯಕ್ತಿಗೆ, ಒಲ್ಲೆನೆನ್ನುವ ಹಕ್ಕಿನ ಚಲಾವಣೆಗೆ ದಾರಿಯಾದದ್ದು ಸಂತೋಷವೇ.

Kishore Kumar Huli 1

ಈ ಮೀಟೂ ಅಭಿಯಾನ ತನ್ನ ಧ್ಯೇಯವನ್ನು ಉಳಿಸಿಕೊಂಡರೆ ನಮ್ಮ ಕೆಲಸದ ಸ್ಥಳವನ್ನು ಆರೋಗ್ಯಕರ ಮತ್ತು ವೃತ್ತಿಪರವಾಗಿ ಮಾಡುವಲ್ಲಿ ಸಫಲವಾಗಲು ತಕ್ಕಮಟ್ಟಿಗೆ ಸಾಧ್ಯ ಎಂದೆಲ್ಲಾ ಯೋಚಿಸಿದ್ದೆ. ಆದರೆ ಅದು ಈ ಬಾರಿ ನನ್ನನ್ನು ಬೆಚ್ಚಿಬೀಳಿಸಿ ನನ್ನ ಕೊರಳ ಪಟ್ಟಿ ಹಿಡಿದು ಒಳಕ್ಕೆಳೆದೊಯ್ದಿತ್ತು. ರಾಜ್ಯಗಳಾದ್ಯಂತ ಜನರ ಪ್ರೀತಿಗೆ ಮಾತ್ರವಲ್ಲ ವೈಯುಕ್ತಿಕವಾಗಿ ನಾನೂ ತುಂಬ ಪ್ರೀತಿ ಗೌರವದಿದ ನೋಡುವ ಒಬ್ಬರ ಕಡೆಗೆ. ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ, ಅಭಿನಯವನ್ನು ಇಷ್ಟಪಟ್ಟಿದ್ದೇನೆ, ಅವರ ಬಾಲ್ಯದ ದಿನಗಳಿಂದ ಅವರ ಕೆಲಸ ನನಗೆ ಅಚ್ಚುಮೆಚ್ಚು. ಅವರು ನನ್ನನ್ನು ನಡೆಸಿಕೊಂಡ ರೀತಿ ತನ್ನ ಜ್ಞಾನವನ್ನು ತಾನು ಪ್ರಪಂಚದಾದ್ಯಂತ ಸಂಗ್ರಹಿಸಿದ ಸಲಕರಣೆಗಳನ್ನು, ತನ್ನ ಊಟವನ್ನು ಸಹ ಹಂಚಿಕೊಂಡ ರೀತಿಯಲ್ಲಿ ಹೃದಯಕ್ಕೆ ತೀರ ಹತ್ತಿರವಾದವರು. ಮಾತ್ರವಲ್ಲ, ಅವರ ಸಹೋದರ ಮತ್ತು ನಾನು ಒಂದೇ ಹೆಸರಷ್ಟೇ ಅಲ್ಲ, ಜನ್ಮ ದಿನಾಂಕ ಕೂಡ. ಹಂಚಿಕೊಂಡಿದ್ದೇವೆ ಎಂಬ ಸಂಗತಿಯಿಂದ ಅವರಿಗೆ ಹತ್ತಿರವೆಂದು ಭ್ರಮಿಸಿದವನು ನಾನು. ಒಟ್ಟಾರೆಯಾಗಿ ಹೇಳಬೇಕೆಂದರೆ ನಾನು ತುಂಬಾ ಇಷ್ಟಪಡುವ ವ್ಯಕ್ತಿ ವ್ಯಕ್ತಿತ್ವ. ಈ ಎಲ್ಲಾ ಆರೋಪಗಳು ನಿಜವೆಂದು ಎಂದಿಗೂ ನಂಬಲು ಬಯಸುವುದಿಲ್ಲ. ಆದರೂ ನಡೆದದ್ದೇನೆಂದು ತಿಳಿಯಲು ಫೇಸ್ ಬುಕ್ ಹೇಳಿಕೆ ಓದಿದೆ. 15 ವರ್ಷಗಳ ಕಾಲ ಅದೇ ಕೆಲಸದಲ್ಲಿದ್ದ, ನನ್ನ ಸ್ವೀಕೃತಿ ಮತ್ತು ತಿಳುವಳಿಕೆಯ ಪ್ರಕಾರ ನನಗನಿಸಿದ್ದು ಇದು ಕೇವಲ ತಪ್ಪು ಗ್ರಹಿಕೆಯೆಂದು.

SRUTHI SARJA

ಆದರೆ ನನಗೆ ಹೆಚ್ಚು ಆಘಾತ ತಂದಿದ್ದು ನಮ್ಮ ಜನರ ಪ್ರತಿಕ್ರಿಯೆ. ಅಷ್ಟೊಂದು ಆಕ್ರಮಣಶೀಲತೆ ಮತ್ತು ದ್ವೇಷ. ಸಾಮಾಜಿಕ ಜಾಲವೆಂಬ ಎರಡಲಗಿನ ಕತ್ತಿಯನ್ನು ಬಳಸಿ ದಾರುಣವಾಗಿ ಆ ಹುಡುಗಿಯ ತೇಜೋವಧೆ ಮಾಡಲಾಗಿತ್ತು. ಇದೇ ನಮ್ಮ ನವಸಮಾಜದ ನಿಜವಾದ ಮುಖವೆಂದು ನೆನೆದರೆ ಗಾಬರಿಯಾಗುತ್ತದೆ. ಇಷ್ಟು ಅಸ್ವಸ್ಥರಾದೆವೇ ನಾವು? ಈ ಅವಾಸ್ತವಿಕ ಅಂತರ್ಜಾಲ ಸಮಾಜ ಇಂದಿನ ನಮ್ಮ ಬಹುತೇಕ ಆಲೋಚನೆಗಳು ಮತ್ತು ಕ್ರಿಯೆಗಳನ್ನು ನಿಯಂತ್ರಿಸುತ್ತಿದೆ ಅದರ ಕಡಿವಾಣ ಯಾರಕೈಲಿದೆಯೋ ಅವರು ನಿರ್ಮಿಸಿದ ಸಿದ್ಧಮಾದರಿಯ ವಿರುದ್ಧದ ಯಾವುದೇ ಅಭಿಪ್ರಾಯವು ಅಪರಾಧ ಮತ್ತು ಅದನ್ನು ನಿಗ್ರಹಿಸಬೇಕು ಎಂದು ತೀರ್ಮಾನಿಸಿದೆ.

Sruthi Arjun ff

ನನ್ನ ಮಟ್ಟಿಗೆ ಅದು ಒಪ್ಪಿತವಲ್ಲ. ಹೌದು ಸಂಘರ್ಷವಿದ್ದೆಡೆ ಅಸಮ್ಮತಿಯ ಧ್ವನಿ ಏಳುತ್ತದೆ. ಆ ದನಿಯೆತ್ತುವ ಅವಕಾಶ ಎಲ್ಲರಿಗೂ ಇರಬೇಕು, ಅದಕ್ಕೆ ಕಿವಿಗೊಡಬೇಕು, ಸರ್ವಸಮ್ಮತ ಪರಿಹಾರ ಹುಡುಕಬೇಕು ಹತ್ತಿಕ್ಕಬಾರದು ಇದು ನನ್ನ ಮಟ್ಟಿಗೆ ಸ್ವಸ್ಥ ಸಮಾಜದ ಲಕ್ಷಣ. ಕನಿಷ್ಟ ಸರಿ ತಪ್ಪುಗಳ ನಿರ್ಣಯವಾಗುವವರೆಗೆ. ಗಂಡುಕುಲದ ಪರವಾಗಿ ಕ್ಷಮೆ ಯಾಚಿಸಿ ಉಲ್ಬಣಗೊಂಡ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸುವ ಹೃದಯ ವೈಶಾಲ್ಯ ತೋರಿದ ಗೆಳೆಯ ಗಿರಿರಾಜರು “ಕುಟುಂಬದಲ್ಲಿ ಒಪ್ಪಿತವಾದ್ದೆಲ್ಲ ಉದ್ಯಮದಲ್ಲಿ ಒಪ್ಪಿತವಲ್ಲ” ಎಂದ ಮಾತುಗಳಲ್ಲಿನ ಪ್ರಸ್ತುತ ಸತ್ಯ ನನ್ನನ್ನು ಆಲೋಚಿಸುವಂತೆ ಮಾಡಿದೆ. ಆಧುನೀಕರಣದ ನಾಗಾಲೋಟದಲ್ಲಿ ಕುಟುಂಬವಾಗಿದ್ದ ಸಿನಿಮಾ ಉದ್ಯಮವಾಗಿ ಹೋದದ್ದು ನನಗೆ ಗೊತ್ತಾಗಲೇ ಇಲ್ಲ. ವಸುದೈವಕುಟುಂಬಕಂನಲ್ಲಿ ಜಗತ್ತೇ ಒಂದು ಕುಟುಂಬವಾಗಿರುವಾಗ ಸಿನಿಮಾಗೆ ಅದು ಸಾಧ್ಯವಿಲ್ಲವೇ?

MeToo 1

ಕೃಷಿಯಲ್ಲೂ ಹಳೆಯ ಪದ್ಧತಿಗಳಲ್ಲೇ ಪರ್ಯಾಯ, ಉತ್ತರ ಕಂಡ ಓಬೀರಾಯನ ಕಾಲದ ಗುಗ್ಗು ನಾನು, ಕಾಲದ ಮೂಸೆಯಲ್ಲಿ ಪಕ್ವಗೊಂಡ ಪರಿಹಾರಗಳೆಂದು ಅವುಗಳಲ್ಲೇ ನನ್ನ ನಂಬಿಕೆ. ನಿಜ ಅವೂ ದಾರಿ ತಪ್ಪಿ ಶೋಷಣೆಯ ಸಾಧನಗಳಾಗಿದ್ದಿದೆ. ಆದರೂ ಇದು ಕುಟುಂಬವಾಗಿದ್ದಾಗ, ರಾಜಣ್ಣನಂಥ ತಂದೆ ವಿಷ್ಣುವಿನಂಥ ಅಣ್ಣ, ಪಾರ್ವತಮ್ಮನವರಂಥ ತಾಯಿಯಿದ್ದಾಗ ಇಂಥವೆಷ್ಟೊ ಸಮಸ್ಯೆಗಳು ಸಮಸ್ಯೆಗಳಾಗುವ ಮುನ್ನವೇ ಬಗೆಹರಿದದ್ದನ್ನ ಕಂಡಿದ್ದೇವೆ ಕೇಳಿದ್ದೇವೆ. ಇದು ಉದ್ಯಮವಾದರೂ ಸಮಸ್ಯೆಗಳು ನಿರ್ಮೂಲವಾಗುವ ಭರವಸೆಯೆಲ್ಲಿದೆ? ಕಾನೂನಿನ ಚೌಕಟ್ಟು ಹಾಕಿ ನಿಯಮದ ಗೆರೆ ಹಿಡಿದು ಕಟಕಟೆಗಳಲ್ಲಿ ನಿಂತು ಹೊಡೆದಾಡಿ ಬದುಕಬಹುದು. ಆದರೆ ಕುಟುಂಬದೊಳಗೇ ಉತ್ತರ ಕಾಣುವ ಬಯಕೆ ನನ್ನದು.

Sruthi Arjun 5

ಕಾನೂನಿನ ಕಠೋರತೆಗಿಂತ ಪ್ರೀತಿಯ ಸಲಹೆ ಬದಲಾವಣೆಗೆ ಆಪ್ತವಲ್ಲವೇ. ನಿಜ, ಕುಟುಂಬದೊಳಗೇ ಶೋಷಣೆಯ ಸಾಧ್ಯತೆಗಳು ಕಮ್ಮಿಯೇನಿಲ್ಲ. ಆದರೂ ನಮ್ಮ ಹಳೆಯ ತಪ್ಪುಗಳಿಂದ ಕಲಿಯಬಹುದಲ್ಲವೇ. ಇಂದು ಹೆಣ್ಣಿಗೆ ಕುಟುಂಬದೊಳಗೇ ದನಿಯಿದೆ. ಅದನ್ನು ಸಾರಿ ಹೇಳಬೇಕಿದೆ. ಸಿನಿಮಾ ಕುಟುಂಬ ಹೊಲಸೆಂಬ ಕಲ್ಪನೆಯ ತೊಳೆಯಬೇಕಿದೆ. ಆ ಹೆಣ್ಣು ನನ್ನ ಕುಟುಂಬದ ಹೆಣ್ಣು ಅವಳ ನಿಂದನೆ ಸಲ್ಲ. ಅವಳ ಆರೋಪ ನನ್ನ ವಿರುದ್ಧವೇ ಆದರೂ ಸರಿ ಅದನ್ನು ಭರಿಸುವ ಶಕ್ತಿ ನನಗಿದೆ, ಗಂಡಿನ ಅಹಮ್ಮೆಂದರೂ ಸರಿಯೇ. ಆದರೆ ಯಾವ ಕಾರಣಕ್ಕೂ ನನ್ನ ಕುಟುಂಬದ ಹೆಣ್ಣಿನ ತೇಜೋವಧೆಯಾಗುವುದು ನನಗೆ ಒಪ್ಪಿತವಲ್ಲ. ಪ್ರೇಕ್ಷಕನೇನು ಹೊರಗಿನವನಲ್ಲ. ಅವನೂ ಅಣ್ಣ ಅಕ್ಕನೆಂದು ಇದೇ ಕುಟುಂಬವ ಸುತ್ತಿ ಸುತ್ತಿ ಬಂದ ಸದಸ್ಯನೇ. ಅವನೇ ತನ್ನ ಕುಟುಂಬದ ಹೆಣ್ಣಿನ ಚಾರಿತ್ರ್ಯವಧೆ ಮಾಡುವುದು ತಪ್ಪಲ್ಲವೇ. ಇಂದು ಅವನ ತೀವ್ರ ಪ್ರತಿಕ್ರಿಯೆಯೂ ನನ್ಣಣ್ಣನೂ ಅವನಣ್ಣನೆಂಬ ಭಾವುಕ ಸಂಬಂಧದಿಂದಲೇ ಅಲ್ಲವೇ. ನಿಮಗೆ ಬೇಸರವಾಗಿದ್ದರೂ ಸರಿ ಅದೇ ಕುಟುಂಬದ ಈ ಹೆಣ್ಣು ನಿಮ್ಮ ಅಕ್ಕನೋ ತಂಗಿಯೋ ಎನ್ನುವುದ ಮರೆತಿರೇಕೆ? ಅವಳ ದನಿಯ ಹತ್ತಿಕ್ಕಬೇಡಿ.

Sruthi Hariharan

ನಿಜ, ಹಲವು ಸಂದರ್ಭಗಳಲ್ಲಿ ಸರಿ ತಪ್ಪುಗಳು ಮಸುಕಾಗಿ ನೋವನುಭವಿಸಬೇಕಾಗಬಹುದು. ಆದರೆ ತಪ್ಪಾದರೂ ಸರಿ ಇಂದು ಈ ದನಿಯನ್ನು ಹತ್ತಿಕ್ಕಿದರೆ ಬರುವ ನಾಳೆಗಳಲ್ಲಿ ದನಿಯೆತ್ತಲೇಬೇಕಾದ ಸಂದರ್ಭದಲ್ಲೂ ಭಯದಿಂದ ನಮ್ಮ ಅಕ್ಕ ತಂಗಿ ಗೆಳತಿಯರ ಸದ್ದಡಗಿ ಸಾಯಬಹುದು. ನಮ್ಮ ಕುಟುಂಬದ ಮಾನ ರಕ್ಷಣೆ ನಮ್ಮ ಕರ್ತವ್ಯ ಸರಿತಪ್ಪು ಹಿರಿಯರು ತಿಳಿದವರು ನಿರ್ಧರಿಸಲಿ. ಭಾವುಕ ಮೂರ್ಖನಂತೆ, ಶಿಲಾಯುಗದವನಂತೆ ಕಂಡರೂ ದ್ರೋಹಿಯಂತೆ ಕಂಡರೂ ಅಣ್ಣನ ಮನಸ್ಸಿಗೆ ನೋವಾಗುವ ಅರಿವಿದ್ದರೂ ಸರಿತಪ್ಪುಗಳ ಲೆಕ್ಕಿಸದೇ ಎಷ್ಟೋ ಹೆಣ್ಣುಮಕ್ಕಳ ನಿಂದಿಸಿದವರ ಛೇಡಿಸಿದವರ ಮೂಳೆ ಮುರಿದು ಅವರ ಪರ ನಿಂತ ನನ್ನಣ್ಣ ನನ್ನನ್ನು ಅರ್ಥ ಮಾಡಿಕೊಳ್ಳದೇ ಹೋಗಲಾರನೆಂಬ ನಂಬಿಕೆಯೊಂದಿಗೆ, ಯಾರ ಪರ ವಿರೋಧವಾಗಿಯೂ ಅಲ್ಲ ನಮ್ಮ ಕುಟುಂಬದ ಹೆಣ್ಣಿನ ಜತೆ ನಿಂತಿದ್ದೇನೆ. ಪ್ರೇಕ್ಷಕ ಸಹೋದರರಲ್ಲಿ ಕೈಮುಗಿದು ಬೇಡುತ್ತಾ -ಇದು ನಿಮ್ಮ ಕುಟುಂಬದ ಹೆಣ್ಣು ನಿಂದಿಸದರಿ.

Sruthi Arjun

ಅಂತಿಮವಾಗಿ ಬರೆದಿದ್ದನ್ನು ಮುಗಿಸಲು ಮತ್ತೆ ಓದುತ್ತಾ ಬಂದೆ ಖಿನ್ನತೆಯ ಮಡುವಿನಲ್ಲಿ ಸರಿ ಮತ್ತು ತಪ್ಪುಗಳು ಮರೆಯಾಗಿ ಹೋದವು. ಈ ಘಟನೆಯ ಭಾಗವಾದ ನನ್ನವರು ಮತ್ತು ಅವರ ಕುಟುಂಬಗಳ ಪರಿಸ್ಥಿತಿಯನ್ನು ನೆನೆದು ಮನಸ್ಸು ಭಾರವಾಯಿತು. ನನ್ನ ಗಂಡುಕುಲ, ಹೆಣ್ಣುಕುಲ, ನನ್ನ ಜಾತಿ, ನನ್ನ ಭಾಷೆ, ನನ್ನ ರಾಷ್ಟ್ರೀಯತೆ, ನನ್ನ ಮತ್ತು ನನ್ನೆಲ್ಲದರ ಪರವಾಗಿ ಕೂಗಿ ಕ್ಷಮೆ ಕೇಳಲೇ? ನನ್ನಲ್ಲಿರುವ ಛಿದ್ರಗೊಂಡ ನಾನು ಕೇಳುವ ಆ ಕ್ಷಮೆಗೆ ತಿಳಿದೋ ತಿಳಿಯದೆಯೋ ನಾನು ಒಡೆದ ಲೆಕ್ಕವಿಲ್ಲದಷ್ಟು ಮನಗಳು ಮನೆಗಳು ಸಂಬಂಧಗಳನ್ನು ಸರಿಪಡಿಸಲು ಶಕ್ತಿಯಿದೆಯೇ ಮತ್ತೆ ಅವುಗಳನ್ನು ಮೊದಲಿನ ಹಾಗೇ ಒಡೆದ ಬಿರುಕುಗಳು ಕಾಣದಂತೆ ಮಾಡಲು ಸಾಧ್ಯವೇ? ಏಕೋ ಮೀಟೂ ನ `ನಾನು’ ವಿಗೆ ಉತ್ತರವಾಗಿ ಗೆಳೆಯ ಗಿರಿರಾಜರ `ಜಟ್ಟ’ ಸಿನಿಮಾ ಮತ್ತದರ `ಪ್ರೀತಿಯೊಂದೆ ಪ್ರಾರ್ಥನೆಯು’ ಹಾಡು ಜ್ಞಾಪಕ ಬರುತ್ತಿದೆ. ನನ್ನ ಮತ್ತು ಮೀಟೂವಿನ ನಡುವೆ ಹರಿದು ಇಬ್ಭಾಗವಾಗಿಹೋದ ಹೃದಯದ ಕೂಗು ಹೇಳುತ್ತಲೇ ಇದೆ, ಇದೆಲ್ಲ ಕೇವಲ ತಪ್ಪುತಿಳುವಳಿಕೆಯೆಂದು.

Share This Article
Leave a Comment

Leave a Reply

Your email address will not be published. Required fields are marked *