ಮಂಡ್ಯ: ಡೆಡ್ ಹಾರ್ಸ್ ಗಳೆಲ್ಲಾ ಮಾತನಾಡುವ ಹಾಗಾಗಿದೆ ಅಂತ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರನ್ನು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಸತ್ತ ಕುದುರೆಗೆ ಹೋಲಿಸಿದ್ದಾರೆ.
ಮಂಡ್ಯದ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಇತಿಹಾಸದಲ್ಲಿ 52 ಸಾವಿರ ಲೀಡ್ ನಲ್ಲಿ ನಾಗಮಂಗಲದಲ್ಲಿ ಗೆದ್ದಿದ್ದು ನೋಡಿದ್ದೀರಾ. ಚೆಲುವರಾಯಸ್ವಾಮಿ ಅವರನ್ನು ಜನರು ಸ್ವಲ್ಪ ಬಾಯಿಮುಚ್ಚಿಕೊಂಡು ಇರಲಿ ಅಂತ ಸೋಲಿಸಿ ಕಳುಹಿಸಿದ್ದಾರೆ. ಮೊದಲು ಅವರು ಅದನ್ನು ಮಾಡಲಿ ಅಂತ ಹೇಳಿದ್ರು.
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಗೆ ನಮ್ಮ ಪಕ್ಷದಲ್ಲಿ ಸಮರ್ಥರಿದ್ದಾರೆ. ಸ್ಪರ್ಧೆಯೂ ಇದೆ. ಅಂತಿಮವಾಗಿ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು, ಸಿಎಂ ಕುಮಾರಣ್ಣ ಅವರು ತೀರ್ಮಾನ ಮಾಡುತ್ತಾರೆ. ಹೀಗೆ ತೀರ್ಮಾನ ಮಾಡಿದ ಅಭ್ಯರ್ಥಿಯನ್ನು ಅತ್ಯಂತ ಅಂತರದಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಜನತೆ ಗೆಲ್ಲಿಸಿಕೊಡುತ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ನೀವು ಯಾರನ್ನಾದ್ರೂ ಸೂಚಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾನೊಬ್ಬ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರಿಂದ ಸಮರ್ಥವಾಗಿ ನನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು. ಆ ಹಿನ್ನೆಲೆಯಲ್ಲಿ ಇರುವಂತಹ ವಸ್ತು ಸ್ಥಿತಿಯನ್ನು ರಾಷ್ಟ್ರಧ್ಯಕ್ಷ, ಸಿಎಂ ಹಾಗೂ ರಾಜ್ಯಾಧ್ಯಕ್ಷರಿಗೆ ಮನವರಿಗೆ ಮಾಡಿಕೊಡುತ್ತೇನೆ. ಅದರ ಹಿನ್ನೆಲೆಯಲ್ಲಿ ಪಕ್ಷ ತೀರ್ಮಾನ ಮಾಡಿಕೊಡುತ್ತದೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಅಂದ್ರು.
ಮೈತ್ರಿ ಬೇಕು ಅಂತ ಮಂಡ್ಯದಲ್ಲಿ ಯಾರೂ ಗೋಗರೆಯುತ್ತಿಲ್ಲ. ಜನ ಕೊಟ್ಟ ತೀರ್ಪಿನಿಂದ ಅನಿವಾರ್ಯತೆ ಬಂದ ಕಾರಣ ಈ ರಾಜ್ಯದಲ್ಲಿ ಇಂದು ಸಮ್ಮಿಶ್ರ ಸರ್ಕಾರ ಆಗಿದೆ. ಆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಸುಭದ್ರವಾಗಿದೆ. ಹೀಗಾಗಿ ಇಂದು ನಾವು ಯಾರ ಜೊತೆನೂ ಅಂಗಲಾಚುವ ಅಗತ್ಯತೆ ಇಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ನಾಯಕರು ಮೈತ್ರಿಗೆ ಸಮ್ಮತಿಸಿದ್ರು. ಹೀಗಾಗಿ ಎರಡೂ ಪಕ್ಷದ ನಾಯಕರು ತೀರ್ಮಾನಕ್ಕೆ ನಾನೂ ನಡೀಬೇಕಾಗುತ್ತದೆ. ಚಲುವರಾಯ ಸ್ವಾಮಿ ಅವರೂ ನಡೀಬೇಕಾಗಿದೆ ಅಂತ ಅವರು ತಿಳಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv