– ಸಾಲ ಪಡೆದ ವ್ಯಕ್ತಿಯ ಕಾಲಿಗೆ ಬಿದ್ದು ಕ್ಷಮೆಯಾಚಿಸುವ ವಿಡಿಯೋ ಮಾಡಿದ್ರು
ಮೈಸೂರು: ಸಾಲದ ವ್ಯವಹಾರವೊಂದಕ್ಕೆ ಮಧ್ಯಪ್ರವೇಶ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರೊಬ್ಬರು ಸಾಲ ಕೊಟ್ಟ ವ್ಯಕ್ತಿಯ ಮೇಲೆ ಗೂಂಡಾಗಿರಿ ಮಾಡಿರೋದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಜಿ ಸಿಎಂ ಆಪ್ತರಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಿ. ಧ್ರುವಕುಮಾರ್ ಈ ರೀತಿ ದಬ್ಬಾಳಿಕೆ ಮಾಡಿದ್ದು, ಅವರ ವಿರುದ್ಧ ತೊಂದರೆಗೊಳಗಾದ ವ್ಯಾಪಾರಿ ಗೃಹಸಚಿವರಿಗೆ ದೂರು ನೀಡಿದ್ದಾರೆ. ಮೈಸೂರಿನ ಸಂತೇಪೇಟೆ ವ್ಯಾಪಾರಿ ಪ್ರಭು ಎಂಬವರೇ ಗೂಂಡಾಗಿರಿಗೆ ಒಳಗಾದವರು.
ವ್ಯಾಪಾರಿ ಬೋಡಾರಾಮ್ ಎಂಬವರಿಗೆ ಪ್ರಭು 70 ಲಕ್ಷ ರೂಪಾಯಿ ಸಾಲ ನೀಡಿದ್ದು, ಆ ಹಣವನ್ನು ಸಕಾಲಕ್ಕೆ ಪಾವತಿ ಮಾಡಿರಲಿಲ್ಲ. ಈ ಬಗ್ಗೆ ಪ್ರಭು ಅವರು ದೇವರಾಜ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪ್ರಕರಣಕ್ಕೆ ಮಧ್ಯಪ್ರವೇಶ ಮಾಡಿದ ಡಿ. ಧ್ರುವಕುಮಾರ್, ಕೇವಲ 17 ಲಕ್ಷಕ್ಕೆ ರಾಜಿ ಮಾಡಿಕೊಳ್ಳಬೇಕೆಂದು ಬಲವಂತವಾಗಿ ಸಹಿ ಹಾಕಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಸಾಲ ಪಡೆದ ವ್ಯಕ್ತಿಯನ್ನು ತಮ್ಮ ಮನೆಗೆ ಕರೆಸಿಕೊಂಡ ಡಿ. ಧ್ರುವಕುಮಾರ್, ಅಲ್ಲಿಗೆ ಪ್ರಭುವನ್ನು ಕರೆಸಿಕೊಂಡು ಧಮ್ಕಿ ಹಾಕಿ ಸಾಲ ಪಡೆದ ವ್ಯಕ್ತಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿಸಿದ್ದಾರೆ. ಇದನ್ನು ವೀಡೀಯೋ ಚಿತ್ರೀಕರಣ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಸಿ ಮಾನ ಕಳೆದಿದ್ದಾರೆ.
ತಮ್ಮ ಮೇಲೆ ನಡೆದ ದಬ್ಬಾಳಿಕೆ, ದೌರ್ಜನ್ಯದ ಬಗ್ಗೆ ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ದೂರು ನೀಡಿದ್ದು, ಗೃಹಸಚಿವರು ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ. ಪ್ರಕರಣವನ್ನು ದೇವರಾಜ ಎಸಿಪಿಗೆ ಒಪ್ಪಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv