ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲವರ್ಧನೆ ಮಾಡುವ ಉದ್ದೇಶದಿಂದ ಚುನಾವಣೆಗೂ ಮುನ್ನ ವಾಣಿಜ್ಯ ನಗರಿಯಲ್ಲಿ ಮನೆ ಮಾಡಿದ್ದ ಸಿಎಂ ಕುಮಾರಸ್ವಾಮಿ ಈಗ ಸದ್ದಿಲ್ಲದಂತೆ ಆ ಮನೆಯನ್ನು ಖಾಲಿ ಮಾಡಿದ್ದಾರೆ.
2016 ರ ನವೆಂಬರ್ 18 ರಂದು ಗೃಹ ಪ್ರವೇಶ ಮಾಡಿದ್ರು. ಹುಬ್ಬಳ್ಳಿಯ ಭೈರಿದೇವರಕೊಪ್ಪದ ಮಾಯಾಕಾರ ಕಾಲೋನಿಯಲ್ಲಿರುವ ಏಕದಂತ ನಿವಾಸವನ್ನು ಈ ಭಾಗದ ಕೇಂದ್ರ ಬಿಂದುವಾಗಿ ಮಾಡಿಕೊಂಡಿದ್ರು. ಆದ್ರೆ ಈಗ ಸಿಎಂ ಆದ ಮೇಲೆ ಮನೆಯನ್ನು ಸಂಪೂರ್ಣ ಖಾಲಿ ಮಾಡಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸಮ್ಮಿಶ್ರ ಸರ್ಕಾರ ರಚಿಸಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಆದ ಕೂಡಲೇ ಉತ್ತರ ಕರ್ನಾಟಕ ಜನರು ಬಹಳ ಸಂತಸ ವ್ಯಕ್ತಪಡಿಸಿದ್ದರು. ಹುಬ್ಬಳ್ಳಿಯಲ್ಲಿ ಮನೆ ಇದೆ. ಇತ್ತ ಬಂದೆ ಬರ್ತಾರೆ. ಅವರು ನಮ್ಮ ನೋವುಗಳಿಗೆ ಹಾಗೂ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಅಲ್ಲದೇ ದೂರದ ಬೆಂಗಳೂರಿಗೆ ಹೋಗಿ ಅವರನ್ನು ಭೇಟಿಯಾಗುವ ಬದಲು ಇಲ್ಲೇ ಹತ್ತಿರದಲ್ಲಿ ಸಿಎಂ ಅವರನ್ನು ಭೇಟಿಯಾಗಬಹುದು ಅಂತಾ ಅಂದುಕೊಂಡಿದ್ದರು. ಆದರೆ ಈಗ ಮನೆ ಖಾಲಿ ಮಾಡುವ ಮೂಲಕ ಇಲ್ಲಿನ ಜನರ ಭಾವನೆಗಳನ್ನು ಅರಿಯದೇ ಹುಸಿಗೊಳಿಸಿದ್ದಾರೆ. ಕುಮಾರಣ್ಣ ಅಧಿಕಾರಕ್ಕೆ ಬಂದ್ಮೇಲೆ ಉತ್ತರ ಕರ್ನಾಟವನ್ನ ನಿರ್ಲಕ್ಷ್ಯಿಸ್ತಿದ್ದಾರೆ ಅನ್ನೋ ಗಂಭೀರ ಆರೋಪ ಇತ್ತು. ಆದ್ರೆ, ಕುಮಾರಣ್ಣ ಏಕಾಏಕಿ ಹುಬ್ಬಳ್ಳಿಯನ್ನ ಮನೆ ಖಾಲಿ ಮಾಡಿರೋದನ್ನ ನೋಡಿದ್ರೆ ಅದು ಸತ್ಯ ಅನ್ನಿಸುತ್ತದೆ ಅಂತ ಸ್ಥಳೀಯ ನಿವಾಸಿ ಶಿವಾನಂದ್ ತಿಳಿಸಿದ್ದಾರೆ. ಇದನ್ನೂ ಓದಿ: ಮಾರಾಟಕ್ಕಿದೆ ಸಿಎಂ ಎಚ್ಡಿಕೆ ನೆಲೆಸಿದ್ದ ಹುಬ್ಬಳ್ಳಿ ನಿವಾಸ!
ಹುಬ್ಬಳ್ಳಿಯಲ್ಲಿ ಕುಮಾರಸ್ವಾಮಿ ಅವರಿಗೆ ಮನೆ ಬಾಡಿಗೆ ನೀಡಿದ್ದ ಮಾಲೀಕ ಕೂಡ ನನಗೆ ಬಾಡಿಗೆ ಬೇಡ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ರೆ ಸಾಕು ಅಂತಾ ಹೇಳಿದ್ರು. ಸಾಲ ಮನ್ನಾ ಮಾಡಿದ್ದಾರೆ. ಆದರೆ, ಉತ್ತರ ಕರ್ನಾಟಕ ಸಂಪೂರ್ಣ ಅಭಿವೃದ್ಧಿಗೊಳಿಸುತ್ತೇನೆ ಅಂತಾ ಹೇಳಿದ್ದ ಸಿಎಂ ಕುಮಾರಸ್ವಾಮಿ ಈಗ ಮನೆ ಖಾಲಿ ಮಾಡಿರುವುದು ಪಕ್ಷ ಬಲವರ್ಧನೆ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಆಸೆಗೆ ತಣ್ಣೀರು ಎರಚಿದಂತಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=94UPNsKjIQI