ಕಾರವಾರ: ಭಾರೀ ಮಳೆಯ ಪರಿಣಾಮ ಅರಣ್ಯದಿಂದ ಹರಿದ ನೀರಿನೊಂದಿಗೆ 12 ಅಡಿ ಉದ್ದದ ಹೆಬ್ಬಾವೊಂದು ತೆರೆದ ನೀರಿನ ಟ್ಯಾಂಕ್ ನಲ್ಲಿ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.
ನಗದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಪೂರ್ಣಿಮಾ ಹೋಟೆಲಿನ ಹಿಂಭಾಗದಲ್ಲಿದ್ದ ಗುಡ್ಡದಲ್ಲಿ ಮಳೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿದೆ. ಇದರೊಂದಿಗೆ ಹೆಬ್ಬಾವು ತೇಲಿಬಂದು ಇಲ್ಲಿನ ತೆರೆದ ನೀರಿನ ಟ್ಯಾಂಕ್ ಗೆ ಬಿದ್ದಿದೆ.
ಇದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿಗಳು ಉರಗ ತಜ್ಞ ಪವನ್ ರವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪವನ್ ಸುಮಾರು ಹತ್ತು ಅಡಿಗಳಷ್ಟು ಆಳವಿದ್ದ ಟ್ಯಾಂಕ್ ನಿಂದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಮಳೆಗಾಲ ಹೆಚ್ಚಾದಾಗ ಆಹಾರ ಹುಡುಕಿ ಕಾಡಿನಿಂದ ಹೆಬ್ಬಾವುಗಳು ವಲಸೆ ಬರುವುದು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಮಳೆ ನೀರಿಗೆ ಕೊಚ್ಚಿ ಮಾನವ ನಿರ್ಮಿತ ಬಾವಿಗಳು ಹಾಗೂ ಈ ರೀತಿಯ ತೆರೆದ ಟ್ಯಾಂಕ್ ಗಳಲ್ಲಿ ಬಿದ್ದು ಎಷ್ಟೋ ಹಾವುಗಳು ಆಹಾರವಿಲ್ಲದೆ ಸಾವನ್ನಪ್ಪುತ್ತವೆ ಎಂದು ಉರಗ ತಜ್ಞ ಪವನ್ ಹೇಳಿದ್ದಾರೆ.