ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ನೀವು ಕೊಡಗಿಗೆ ಭೇಟಿ ನೀಡುವಾಗ ಎಲ್ಲಾ ಮಾಧ್ಯಮದವರನ್ನು ಕರೆದುಕೊಂಡು ಹೋಗಿ. ಆ ಎರಡು ದಿನ ನೀವು ಏನೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ ಅದನ್ನು ಇಡೀ ರಾಜ್ಯದ ಜನರಿಗೆ ತಿಳಿಸುವಂತಹ ಕೆಲಸ ಮಾಡಿದ್ರೆ ಮಾತ್ರ ನೀವು ಹೇಳಿದಂತಹ ಮಾತಿಗೆ ಗೌರವ ಬರುತ್ತದೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗತ್ತಿಗೇ ಗೊತ್ತಿರುವಂತಹ ಸತ್ಯ ಸಣ್ಣ ಮಗುವಿಗೂ ಗೊತ್ತಾಗಿದೆ. ಎರಡು ದಿನ ಕೊಡಗಿಗೆ ಹೋಗಿ ಇರುತ್ತೇನೆ ಅಂತ ಸಿಎಂ ಅವರು ಹೇಳಿದ್ದಾರಂತೆ. ಅಲ್ಲಿ ಬೇಕಾದಷ್ಟು ರೆಸಾರ್ಟ್ ಗಳಿವೆ. ಹೀಗಾಗಿ ಬಹುಶಃ ಅವರು ಎರಡು ದಿನ ಹೋಗುವುದು ಕೊಡಗಿನ ಅಧ್ಯಯನ ಮಾಡಲು ಅಲ್ಲ. ಬದಲಾಗಿ ಅಲ್ಲಿ ಹೋಗಿ ಎರಡು ದಿನ ವಿಶ್ರಾಂತಿ ತೆಗೆದುಕೊಳ್ಳಲು ಹೋಗುತ್ತಿದ್ದಾರೆ ಅಂತ ಡಿವಿಎಸ್ ಟೀಕೆ ಮಾಡಿದ್ದಾರೆ.
ಯಾರೇ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರಲಿ. ಅವನು ಕೊಡಗಿನಿಂದ ಬರುವಂತಹ ನೀರನ್ನೇ ಅವನು ಕುಡಿಯುತ್ತಾನೆ. ಹೀಗಾಗಿ ಕುಡಿಯುವ ನೀರಿಗೆ ಅಗೌರವ ತೋರುವ ಒಬ್ಬ ಯಾರಾದ್ರೂ ಮುಖ್ಯಮಂತ್ರಿ ಮಾಡಿದ್ರೆ, ನಾವು ಬಿಡಿ ಆ ದೇವರು ಕೂಡ ಮೆಚ್ಚಲ್ಲ ಅಂದ್ರು. ಇದನ್ನೂ ಓದಿ: ಎಚ್ಡಿಕೆಯ ವಿಷಕಂಠ ಹೇಳಿಕೆಗೂ ಕಾಂಗ್ರೆಸ್ಗೂ ಸಂಬಂಧವಿಲ್ಲ: ದಿನೇಶ್ ಗುಂಡೂರಾವ್
ಕೊಡಗು ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಅತ್ಯಂತ ಹೆಚ್ಚು ಪ್ರವಾಸಿಗರನ್ನು ಆಕರ್ಷಣೆ ಮಾಡುವ ಪ್ರವಾಸಿ ಕೇಂದ್ರವೂ ಹೌದು. ಇಷ್ಟು ಮಾತ್ರವಲ್ಲದೇ ಅತೀ ಹೆಚ್ಚು ಆದಾಯ ತರುವಂತಹ ಕಾಫಿ ಬೆಳೆಯುವ ನಾಡು ಇದಾಗಿದೆ. ವೀರಯೋಧರನ್ನೂ, ಹಾಕಿ ಆಟಗಾರರನ್ನು ದೇಶಕ್ಕೆ ಕೊಟ್ಟ ಜಿಲ್ಲೆಯಾಗಿದೆ. ಇಂತಹ ಪುಣ್ಯದ ನಾಡು ಕೊಡಗನ್ನೇ ಇಂದು ನಿರ್ಲಕ್ಷ್ಯಿಸಲಾಗಿದೆ ಅಂತ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ರು.
ಗಟ್ಸ್ ಪ್ರದರ್ಶಿಸಲಿ:
ಕೊಡಗಿನ ಬಾಲಕ ವಿಡಿಯೋದಲ್ಲಿ ಬಿಜೆಪಿಯ ಕೈವಾಡ ಇದೆ ಅನ್ನೋ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರಲ್ಲೇ ಗುಪ್ತಚರ ಇಲಾಖೆ ಇದೆ. ಒಬ್ಬ ಮುಖ್ಯಮಂತ್ರಿಯಾಗಿದ್ದವ ಯಾರ್ಯಾರೋ ಏನೇನೋ ಮಾಡಿದ್ದಾರೆ ಅಂತ ಹೇಳೋ ಬದಲು, ಈ ಬಗ್ಗೆ ನಾನು ತನಿಖೆ ಮಾಡಿಸುತ್ತೇನೆ. ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಸಾರ್ವಜನಿಕರಿಗೆ ನಾನು ತೋರಿಸಿಕೊಡುತ್ತೇನೆ ಅಂತ ಗಟ್ಸ್ ಪ್ರದರ್ಶನ ಮಾಡಬೇಕು. ಅದು ಬಿಟ್ಟು ಒಂದು ಗಂಟೆ ಅಳೋದಲ್ಲ. ಮುಖ್ಯಮಂತ್ರಿಯಾಗಿದ್ದವ ಉದ್ವೇಗದಲ್ಲಿ ಒಂದು ನಿಮಿಷ ಕಣ್ಣೀರು ಹಾಕುವುದು ಸರಿ. ಅದು ಬಿಟ್ಟು ಎರಡೆರಡು ಕರ್ಚಿಫ್ ಒದ್ದೆ ಮಾಡಿಕೊಂಡು ಜನರನ್ನು ಮರುಳು ಮಾಡುವಂತವ್ರಿಗೆ ತನಿಖೆ ಮಾಡಲು ನನಗೆ ಹಕ್ಕಿದೆ ಎಂಬುದು ಗೊತ್ತಾಗಲ್ವ ಅಂತ ವ್ಯಂಗ್ಯವಾಡಿದ್ರು. ಇದನ್ನೂ ಓದಿ: ಸಿಎಂ ಎಚ್ಡಿಕೆ ಖುಷಿಯಾಗಿಯೇ ಇದ್ದಾರೆ- ಡಿಸಿಎಂ ಪರಮೇಶ್ವರ್