ಬೆಂಗಳೂರು: ಅನುಮಾನಾಸ್ಪದವಾಗಿ ಕಾಣಿಸಿಕೊಂಡ ವ್ಯಕ್ತಿಯನ್ನು ಮಕ್ಕಳ ಕಳ್ಳನೆಂದು ಶಂಕಿಸಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಹೆಚ್ಎಎಲ್ ಬಳಿ ನಡೆದಿದೆ.
ಅಸ್ಸಾಂ ಮೂಲದ ಚಂದ್ರಕುಮಾರ್ ಎಂಬಾತ ಸಾರ್ವಜನಿಕರಿಂದ ಸಖತ್ ಗೂಸಾ ತಿಂದಾತ. ಹೆಚ್ಎಎಲ್ ಬಳಿಯ ದೊಡ್ಡನೆಕ್ಕುಂದಿ ಸರ್ಕಾರಿ ಶಾಲೆ ಬಳಿ ಇಂದು ಸಂಜೆ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಚಂದ್ರಕುಮಾರ್ ನನ್ನು ಕಂಡ ಜನರು ಕಂಬಕ್ಕೆ ಕಟ್ಟಿ ಹಿಗ್ಗಮುಗ್ಗಾ ಥಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಚಂದ್ರಕಾಂತ್ ಗಾಂಜಾ ಸೇವನೆ ಮಾಡಿ ನಶೆಯಲ್ಲಿ ತಿರುಗಾಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಸದ್ಯ ಚಂದ್ರಕುಮಾರ್ ನನ್ನು ವಶಕ್ಕೆ ಪಡೆದು ಎಚ್ಎಎಲ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮೇ 24 ರಂದು ಮಕ್ಕಳ ಕಳ್ಳ ಎಂದು ರಾಜಸ್ಥಾನ ಮೂಲದ ಕಾಲುರಾಮ್ ಅಲಿಯಾಸ್ ಬಚ್ಚನ್ ರಾಮ್ ಎಂಬಾತನ್ನು ನಗರದ ಕಾಟನ್ ಪೇಟೆ ಬಳಿಯ ಭಕ್ಷಿ ಗಾರ್ಡನ್ ಬಳಿ ಸಾರ್ವಜನಿಕರು ಥಳಿಸಿ ಕೊಲೆ ಮಾಡಿದ್ದರು. ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಡಿಯೋ ಆಧರಿಸಿ ಹಲವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಕ್ಕಳ ಕಳ್ಳರ ವದಂತಿ ಹೆಚ್ಚಾಗಿತ್ತು. ಇದಾದ ಬಳಿಕ ಪೊಲೀಸರು ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದ್ದರೂ ಈಗ ಮತ್ತದೇ ರೀತಿಯ ಘಟನೆಗಳು ನಡೆಯುತ್ತಿದೆ.