ತಿರುವಂತನಪುರಂ: ತಾಯಿಯೇ ತನ್ನ 14 ವರ್ಷದ ಮಗನನ್ನು ಕೊಲೆ ಮಾಡಿ ಕತ್ತರಿಸಿ ಪೀಸ್ ಪೀಸ್ ಮಾಡಿ ಸುಟ್ಟು ಹಾಕಿರುವ ಮನಕಲಕುವಂತಹ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.
ಆರೋಪಿ 45 ವರ್ಷದ ಜಯಮೊಲ್ ಮಗನನ್ನೇ ಕೊಂದ ನಿರ್ದಯಿ ತಾಯಿ. 14 ವರ್ಷದ ಜೀತುಜಾಬ್ ತಾಯಿಂದಲೇ ಕೊಲೆಯಾದ ನತದೃಷ್ಟ ಮಗ. ಗುರುವಾರ ಆರೋಪಿ ಜಯಮೊಲ್ಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಜಯಮೊಲ್ ಬಂಧಿಸಿ ವಿಚಾರಣೆ ಮಾಡಿದಾಗ ಯಾವುದೋ ಕಾರಣಕ್ಕೆ ಮಗ ಜೀತುಜಾಬ್ ತಾಯಿಯನ್ನು ಪೀಡಿಸಿದ್ದಾನೆ. ಇದರಿಂದ ಕೋಪಗೊಂಡ ತಾಯಿ ಅವನನ್ನು ಅಡುಗೆ ಮನೆಯೊಳಗೆ ತಳ್ಳಿ ಶಲ್ಯದಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾಳೆ. ನಂತರ ತಾನು ಮಾಡಿದ ಅಪರಾಧವನ್ನು ಮುಚ್ಚಿಡಲು ಮೃತ ದೇಹವನ್ನು ಕತ್ತರಿಸಿ ಬಾಳೆ ತೋಟದಲ್ಲಿ ಸುಟ್ಟು ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತನ್ನ ಕೃತ್ಯ ಮುಚ್ಚಿ ಹಾಕಲು ಮೂರು ದಿನಗಳ ಹಿಂದೆ ಜಯಮೊಲ್ ಜೀತುಜಾಬ್ ನಾಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ನೀಡುವ ನಾಟಕ ಮಾಡಿದ್ದಾಳೆ. ಪೊಲೀಸರು ದೂರು ದಾಖಲಿಸಿಕೊಂಡು ಜೀತುಜಾಬ್ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಮೂರು ದಿನಗಳ ನಂತರ ಪಕ್ಕದ ಬಾಳೆ ತೋಟದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ.
ಆರೋಪಿ ಕೈ ಕೂಡ ಸುಟ್ಟಿದ್ದರಿಂದ ಪೊಲೀಸರು ಅನುಮಾನಗೊಂಡ ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ಆಗ ತನ್ನ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾಳೆ. ಆರೋಪಿ ಜಯಮೊಲ್ ಮಾನಸಿಕ ಅಸ್ವಸ್ಥೆ ಎಂದು ಪತಿ ಜಾಬ್ ವಿ.ಜಾನ್ ತಿಳಿಸಿದ್ದಾರೆ.
ಬಾಲಕನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಘಟನೆ ಬಗ್ಗೆ ಎಲ್ಲಾ ಮೂಲಗಳಿಂದಲೂ ತನಿಖೆ ಮುಂದುವರೆದಿದೆ ಎಂದು ಕೊಲ್ಲಂ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.