ಬಾಗಲಕೋಟೆ: ಪೋಷಕರಿಂದ ಬಳವಳಿಯಾಗಿ ಬಂದ ಆ ಕಾಯಿಲೆ ಇಡೀ ಕುಟಂಬವನ್ನೇ ಸಾವಿನಂಚಿಗೆ ತಂದು ನಿಲ್ಲಿಸಿದೆ. ದುಡಿಯಲು ಮೈಯಲ್ಲಿ ಶಕ್ತಿಯಿಲ್ಲ, ಕುಳಿತು ತಿನ್ನಲು ಸ್ಥಿತಿವಂತರಲ್ಲ, ಬೆಂಬಿಡದೇ ಕಾಡ್ತಿರೋ ಬಡತನದ ಮಧ್ಯೆ ಮಹಾಮಾರಿ ಖಾಯಿಲೆಯ ಕಾಟ. ಈ ಕುಟುಂಬವು ಸಹಾಯ ಕೇಳಿಕೊಂಡು ಇದೀಗ ಬೆಳಕು ಕಾರ್ಯಕ್ರಮಕ್ಕೆ ಬಂದಿದೆ.
ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿ ಪಟ್ಟಣದ ನಿವಾಸಿಗಳಾದ ದಂಪತಿಯ ಹೆಸರು ಈರಪ್ಪ ಸೈದಾಪುರ ಮತ್ತು ಪತ್ನಿ ಕವಿತಾ ಸೈದಾಪುರ. ಇವರ 9 ವರ್ಷದ ದಾಂಪತ್ಯಕ್ಕೆ ಸಾಕ್ಷಿಯಂತೆ ಇಬ್ಬರೂ ಮಕ್ಕಳಿದ್ದಾರೆ. 6 ವರ್ಷದ ಮಗಳು ಭಾಗ್ಯಶ್ರೀ ಹಾಗೂ 3 ವರ್ಷದ ಮಗ ವಿಶಾಲ್. ದುರಂತ ಅಂದರೆ ಅಪ್ಪ-ಅಮ್ಮ ಇಬ್ಬರಿಗೂ ಎಚ್ಐವಿ ಕಾಯಿಲೆ ಇದ್ದು, ಇವರ ಜೊತೆಗೆ 3 ವರ್ಷದ ಪುಟಾಣಿಗೂ ಸೊಂಕು ತಗುಲಿದೆ. ಅದೃಷ್ಟವಶಾತ್ ಮಗಳು ಭಾಗ್ಯಶ್ರೀಗೆ ಯಾವುದೇ ರೀತಿಯ ಸೊಂಕು ತಗುಲಿಲ್ಲ. ಕೊನೆ ದಿನಗಳನ್ನು ಎಣಿಸುತ್ತಿರುವ ಈ ದಂಪತಿ ಕಾಯಿಲೆಯ ಚಿಕಿತ್ಸೆಗಾಗಿ ಹಲವೆಡೆ ಸುತ್ತಾಡಿ 5 ಲಕ್ಷದವರೆಗೂ ಸಾಲ ಮಾಡಿಕೊಂಡಿದ್ದಾರೆ.
ಬೆಂಬಿಡದೇ ಕಾಡ್ತಿರೋ ಎಚ್ಐವಿ ಸೊಂಕಿನಿಂದಾಗಿ ನನ್ನ ಪತಿಗೆ ಕೆಲಸ ಮಾಡಲು ಆಗುತ್ತಿಲ್ಲ. ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಿದೆ. ಇತ್ತ ನಾನು ಕೂಡ ಅದೇ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದೇನೆ. ಜೊತೆಗೆ ಸೊಂಕಿನಿಂದ ನನ್ನ ಮಗ ಪುಟಾಣಿ ವಿಶಾಲ್ನ ಮಾತನ್ನೂ ಕಸಿದುಕೊಂಡು ಮೂಕನನ್ನಾಗಿಸಿದೆ. ಮತ್ತೊಂದು ಕಡೆ ಸಾಲ ಕೊಟ್ಟವರ ಕಾಟ. ಚಿಕಿತ್ಸೆಗೆ ದುಡ್ಡಿಲ್ಲ, ಮಕ್ಕಳನ್ನ ಸಾಕಲು ಶಕ್ತಿ ಇಲ್ಲ, ಮಾಡಿದ ಸಾಲ ತೀರಿಸಲು ದಾರಿ ಕಾಣುತ್ತಿಲ್ಲ. ಆರೋಗ್ಯವಾಗಿರುವ ನನ್ನ ಮಗಳನ್ನು ಯಾರಾದರೂ ದತ್ತು ಪಡೆಯಿರಿ, ಇಲ್ಲವೇ ಬಾಲಮಂದಿರಕ್ಕೆ ಸೇರಿಸಿ ಎಂದು ತಾಯಿ ಕವಿತಾ ಅಂಗಲಾಚಿಕೊಂಡು ನೋವಿನಲ್ಲಿ ಹೇಳಿದ್ದಾರೆ.
ಬದುಕಬೇಕೆಂಬ ಕನಸಿದ್ದರೂ ಸಾವಿನ ಆಟವಾಡುವ ಕಾಯಿಲೆ ಈ ಕುಟುಂಬವನ್ನು ಬೆಂಬಿಡುತ್ತಿಲ್ಲ. ಏನೇ ಆಗಲಿ ಎನೂ ಅರಿಯದ ಈ ಪುಟಾಣಿಗಳ ಬದುಕಿನಲ್ಲಿ ಬೆಳಕು ಹಚ್ಚುವವರು ಬೇಕಾಗಿದೆ.
https://www.youtube.com/watch?v=FvXddLSAMKw