ಹುಬ್ಬಳ್ಳಿ: ತಂದೆಯೊಬ್ಬ ತನ್ನ 16 ವರ್ಷದ ಮಗನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ಕೊನೆಗೆ ತಾನು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹುಬ್ಬಳ್ಳಿ-ಗದಗ ರಸ್ತೆಯ ಒಂಟಿ ಹನುಮಂತ ದೇವಸ್ಥಾನದ ಹಿಂಭಾಗದಲ್ಲಿ ನಡೆದಿದೆ.
16 ವರ್ಷದ ವಿನಯ್ ರೆಡ್ಡಿ ತಂದೆಯಿಂದಲೇ ಕೊಲೆಯಾದ ಮಗ. ರೈಲ್ವೆ ನೌಕರನಾಗಿರುವ 56 ವರ್ಷದ ವಿಠ್ಠಲ್ ರೆಡ್ಡಿ ಮಗನನ್ನೇ ಕೊಲೆಗೈದ ಪಾಪಿ ತಂದೆ. ವಿನಯ್ ಹತ್ತನೇ ತರಗತಿ ಓದುತ್ತಿದ್ದನು. ಇತ್ತೀಚಿಗೆ ಅಪ್ಪ-ಮಗನ ನಡುವೆ ಗಲಾಟೆಗಳು ನಡೆಯುತ್ತಿದ್ದವು.
ಇದನ್ನೂ ಓದಿ: 16 ವರ್ಷದ ಮಗಳನ್ನು ಗುಂಡಿಟ್ಟು ಕೊಂದ ತಂದೆ-ಕಾರಣ ಕೇಳಿದ್ರೆ ಒಂದ್ ಕ್ಷಣ ಶಾಕ್ ಆಗ್ತೀರಾ…!!
ಭಾನುವಾರ ಸಂಜೆ ಮಗನನ್ನು ಗದಗ ರಸ್ತೆಯ ಒಂಟಿ ಹನುಮಂತ ದೇವಸ್ಥಾನದ ಹಿಂದೆ ಕರೆದುಕೊಂಡು ಹೋಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮಗ ಸತ್ತ ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ತೀವ್ರ ಅಸ್ವಸ್ಥಗೊಂಡಿದ್ದ ವಿಠ್ಠಲ್ ರೆಡ್ಡಿಯನ್ನು ರೈಲ್ವೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂಬಂಧ ನಗರದ ಕೇಶವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.