– ಚನ್ನಬಸಪ್ಪ ಯಾಕೆ ನನ್ನ ಕೆಣುಕ್ತಿದ್ದಾರೋ ಗೊತ್ತಾಗ್ತಿಲ್ಲ – ವಂದೇ ಮಾತರಂ ಗೊಂದಲಕ್ಕೆ ಸಿಎಂ ಟಕ್ಕರ್
ಶಿವಮೊಗ್ಗ: ಕಸ್ತೂರಿ ರಂಗನ್ ವರದಿ (Kasturirangan Report) ಸಂವಾದ ವಿಧಾನಸೌಧದಲ್ಲಿ ಕುಳಿತು ಮಾಡಿದ್ರೇ ಪ್ರಯೋಜನ ಆಗಲ್ಲ. ಅದಕ್ಕೆ ಜನರ ಜೊತೆ ಚರ್ಚಿಸಲು ತೀರ್ಥಹಳ್ಳಿಗೆ ಬಂದಿದ್ದೇನೆ ಎಂದು ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರು ಹೇಳಿದ್ದಾರೆ.
ತೀರ್ಥಹಳ್ಳಿಯ (Thirthahalli) ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಸ್ತೂರಿ ರಂಗನ್ ವರದಿ ಕುರಿತು ನೇರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ಇದೊಂದು ವಿಶೇಷ ಅವಕಾಶ. ನಿಮ್ಮನ್ನ ಭೇಟಿ ಮಾಡಲು ಬಂದಿದ್ದೇನೆ. ರೈತರ ಸಮಸ್ಯೆ ಬದುಕಿನ ಸಮಸ್ಯೆ ಎದುರಾಗಿದೆ. ರೈತರ ಭೂಮಿ ರಕ್ಷಣೆ ಮಾಡಬೇಕಿದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ, ಅಭಿಪ್ರಾಯ ಕೇಳಿದೆ. ವಿಧಾನಸೌಧದಲ್ಲಿ ಕುಳಿತು ಈ ಬಗ್ಗೆ ಚರ್ಚೆ ಮಾಡಿದ್ರೇ ಪ್ರಯೋಜನ ಆಗಲ್ಲ ಎಂದು ಇಲ್ಲಿಗೆ ಬಂದಿದ್ದೇನೆ. ಜೊತೆಗೆ ವಿಶೇಷ ಅಧಿವೇಶನ ಕರೆದಿದ್ದೇನೆ ಎಂದರು. ಇದನ್ನೂ ಓದಿ: ಮಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ ಬಿಜೆಪಿ ನಾಯಕರಿಗೆ ತಳಮಳ ಶುರುವಾಗಿದೆ: ಪ್ರಿಯಾಂಕ್ ಖರ್ಗೆ
ನಾನು ಬದುಕಿನ ಮೇಲೆ ರಾಜಕಾರಣ ಮಾಡ್ತೇನೆ
ನಾನು ರೈತರನ್ನು ರಕ್ಷಣೆ ಮಾಡಲು ಇಲ್ಲಿಗೆ ಬಂದಿದ್ದೇನೆ. ಬಂದಾಗ ನಮ್ಮ ಶಿವಮೊಗ್ಗ ಶಾಸಕರು ಸ್ವಾಗತ ನೀಡಿದ್ದಾರೆ. ವಂದೇ ಮಾತರಂ ವಿಚಾರ ಮಾತನಾಡಿದರು. ಹಿಂದಿನಿಂದ ನಾವೇ ಎರಡೇ ಪ್ಯಾರಾ ಹಾಡಿಕೊಂಡು ಬಂದಿದ್ದೇವೆ. ಈಗ ಕೇಂದ್ರ ಸರ್ಕಾರ ಹೊಸ ಆದೇಶ ಮಾಡಿದೆ. ನಾವು ಆದೇಶ ಮಾಡಿದ್ದೇವೆ. ನಾನು ಬದುಕಿನ ಮೇಲೆ ರಾಜಕಾರಣ ಮಾಡ್ತೇನೆ. ಭಾವನೆ ಮೇಲೆ ರಾಜಕಾರಣ ಮಾಡಲ್ಲ. ಸ್ನೇಹಿತ ಚನ್ನಬಸಪ್ಪ ಯಾಕೇ ನನ್ನ ಕೆಣಕ್ತಾ ಇದ್ದಾರೋ ಗೊತ್ತಾಗ್ತಿಲ್ಲ ಎಂದರು.

ಶಿವಮೊಗ್ಗಕ್ಕೆ ಬಂದಾಗ ಶಾಸಕರು ಅಲ್ಲಿ ಮಾಡಬಹುದಿತ್ತು, ಇಲ್ಲಿ ಮಾತನಾಡಿದ್ದಾರೆ. ನಿಮ್ಮ ಪಕ್ಷದ ಸಿದ್ದಾಂತ ನಿಮಗೆ, ನಮ್ಮ ಸಿದ್ದಾಂತ ನಮಗೆ. ನಾನು ಮಾತನಾಡಬೇಕಿಲ್ಲ. ಜನರೇ ಅವರಿಗೆ ಉತ್ತರ ಕೊಟ್ಟಿದ್ದಾರೆ. ಬದುಕು ಮುಖ್ಯ, ಅದರ ಮೇಲೆ ರಾಜಕಾರಣ ಮಾಡೋಣ. ಜನರ ಸಮಸ್ಯೆ ಬಗೆಹರಿಯೋದು ಮುಖ್ಯ. ಬಹಳಷ್ಟು ಜನರು ಸಮಸ್ಯೆ ಅಧ್ಯಯನ ಮಾಡಿದ್ದಾರೆ. ಜನರ ಭಾವನೆ ಮೇಲೆ ಸರ್ಕಾರ ನಡೆಯಬೇಕು. ಇದೇ ಕಾರಣಕ್ಕೆ ಪ್ರಜಾಸೇವೆ ಇಲಾಖೆ ಮಾಡಿದ್ದು ಎಂದರು.
ಕರಾವಳಿ ಜೊತೆ ಮಲೆನಾಡನ್ನ ಸೇರಿಸ್ತೇವೆ
ಮಂತ್ರಿಗಳು ಕೂಡ ತಿಂಗಳಲ್ಲಿ ಎರಡು ದಿನ ಜನರ ಬಳಿ ಹೋಗಬೇಕು. ನಿನ್ನೆ (ಸೆ.18) ಕರಾವಳಿಗೆ ಹೋಗಿದ್ದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡ್ತಿದ್ದೇವೆ. ಮಂಗಳೂರಿನಲ್ಲಿ ಈವರೆಗೆ ಕ್ಯಾಬಿನೆಟ್ ಆಗಿಲ್ಲ. ಭಾಷೆ, ಬದುಕಿನ ಬಗ್ಗೆ, ಮೀನುಗಾರಿಗೆ ಬಗ್ಗೆ ತೀರ್ಮಾನ ಮಾಡಿದ್ದೇವೆ. ಬಂದರು ಭೇಟಿಗೆ ಹೋಗಿದ್ದೆ, ಹಾಗಾಗೀ ಇಲ್ಲಿ ಬರೋದು ತಡವಾಯ್ತು ಎಂದರು.

ಕರಾವಳಿ ಜೊತೆ ಮಲೆನಾಡನ್ನ ಸೇರಿಸ್ತೇವೆ. ಇಲ್ಲಿಗೂ ಆರ್ಥಿಕ ಚೈತನ್ಯ ಆಗುತ್ತೇ. ಪ್ರವಾಸೋದ್ಯಮ ಸಂಪರ್ಕ ಆಗುತ್ತೆ. ರೈತರ ಪರವಾಗಿ ಸರ್ಕಾರ ಖಂಡಿತವಾಗಿ ಇರಲಿದೆ. ಇದರ ಜೊತೆ, ಹೊಸದಾಗಿ ಅರಣ್ಯ ಕಡಿಯಲು ಬಿಡಬೇಡಿ. ಆದರೆ ಪರಂಪರಾಗತವಾಗಿ ವಾಸಿಸುವವರಿಗೆ, ಕೃಷಿ ಮಾಡುವವರಿಗೆ ತೊಂದರೆ ನೀಡಬೇಡಿ ಎಂದು ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದರು.
ರೈತರಿಗೆ ಕಾನೂನು ನೆರವು
ಸರ್ಕಾರದಿಂದ ರೈತರಿಗೆ ಕಾನೂನು ಮೂಲಕ ನೆರವು ನೀಡ್ತೇವೆ. ರೈತರಿಗಾಗಿ ತೇಗದ ಸಿರಿ ಯೋಜನೆ ತಂದಿದ್ದೇವೆ. ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಅಭಿವೃದ್ಧಿ ಮಾಡ್ತೇವೆ. ದೇವರು ಕೊಟ್ಟ ಅವಕಾಶ ಬಳಸಿ, ನಿಮ್ಮ ಬದುಕಿಗೆ ಶಕ್ತಿ ನೀಡ್ತೇನೆ. ಜನ ಉಪಕಾರ ಸ್ಮರಣೆ ಮಾಡ್ತಾರೆ. ಅದೇ ಕಾರಣಕ್ಕೆ ಸರ್ಕಾರ ಗ್ಯಾರಂಟಿ ನೀಡಿದೆ. ಎಲ್ಲರೂ ಸಮಸ್ಯೆ ನನ್ನ ಮುಂದೆ ಇಟ್ಟೀದ್ದೀರಿ. ಕೇಂದ್ರ ಹಾಗೂ ರಾಜ್ಯ ಸೇರಿ ಜನರ ಉಳಿಸುವ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮ ನಡೆಯುತ್ತಿದ್ದಾಗ ಒಮ್ಮೆಲೆ ತೀರ್ಥಹಳ್ಳಿ ಪಟ್ಟಣದಲ್ಲಿ ಮಳೆ ಆರಂಭವಾಗಿದೆ. ಇದರಿಂದ ಚೇರ್ ಹಾಗೂ ಛತ್ರಿ ಹಿಡಿದು ಜನ ಕಾರ್ಯಕ್ರಮದಲ್ಲಿ ನಿಂತಿದ್ದರು. ಇದನ್ನೂ ಓದಿ: ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಪರಮೇಶ್ವರ್

