ಉಡುಪಿ: ಅಮಾಸೆಬೈಲು ಠಾಣಾ ವ್ಯಾಪ್ತಿಯಲ್ಲಿ ನಡೆದ ವಾಸದ ಮನೆ ಕಳವು ಹಾಗೂ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದೇವಸ್ಥಾನದ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಶಿಕಾರಿಪುರ ಮೂಲದ ಇಬ್ಬರು ಆರೋಪಿಗಳನ್ನು ಉಡುಪಿ (Udupi) ಜಿಲ್ಲಾ ಪೊಲೀಸರ ತಂಡ ಬಂಧಿಸಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಮೂಲದ ರಾಕೇಶ್ ಹೆಚ್ (28), ನಂದೀಶ ಎಂ(24) ಎಂಬವರನ್ನು ಪತ್ತೆ ಮಾಡಿ ಹುಲಿಕಲ್ ಘಾಟ್ ಸಮೀಪ ಬಂಧಿಸಿದ್ದು, ಅವರಿಂದ ಕಳ್ಳತನಗೈದ 1,19,720 ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದನ್ನೂ ಓದಿ: ಬೈಕ್ಗೆ KSRTC ಬಸ್ ಡಿಕ್ಕಿ – ಮೂವರು ಸ್ಥಳದಲ್ಲೇ ಸಾವು
ಕುಂದಾಪುರ ತಾಲೂಕಿನ ಮಚ್ಚಟ್ಟು ಗ್ರಾಮದ ಜಾಂಬೂರು ಜೆಡ್ಡು ನೆಲ್ಲಿಗದ್ದೆ ಎಂಬಲ್ಲಿನ ಮನೆಯೊಂದರಲ್ಲಿ ಸೆ.4 ರಂದು ಮನೆಯವರು ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದಾಗ ಬಾಗಿಲಿನ ಬೀಗವನ್ನು ಮುರಿದು ಕಪಾಟಿನಲ್ಲಿದ್ದ 97,000 ರೂಪಾಯಿ ನಗದು ಹಣವನ್ನು ಕಳವು ಮಾಡಿದ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಂಕರನಾರಾಯಾಣ ಠಾಣೆ ವ್ಯಾಪ್ತಿಯ ಕುಳ್ಳುಂಜೆ ಗ್ರಾಮ ಮುಂಡುಕೋಡು ಶ್ರೀ ಜಲದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿದ್ದ ಕಾಣಿಕೆ ಹುಂಡಿಯನ್ನು ಒಡೆದು ಸುಮಾರು 35 ರಿಂದ 40 ಸಾವಿರ ಹಣವನ್ನು ಕಳವು ಮಾಡಿದ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ನ್ಯೂಯಾರ್ಕ್ನಲ್ಲಿ ದುರಂತ: ರೈಲು ಹಳಿ ಮೇಲೆ ಕುಳಿತಿದ್ದ ಭಾರತೀಯ ಮೂಲದ ಯುವತಿ, ಸ್ನೇಹಿತ ಸಾವು
ಈ ಎರಡೂ ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷರಾದ ಸಂತೋಷ್ ಕಾಯ್ಕಣಿ ನೇತೃತ್ವದಲ್ಲಿ ಅಮಾಸೆಬೈಲು ಠಾಣಾ ಪಿಎಸ್ಐ ಭೀಮಾಶಂಕರ್ ಸಿನ್ನೂರ್, ತನಿಖಾ ಪಿಎಸ್ಐ ಸುಧಾರಾಣಿ ಟಿ., ಶಂಕರನಾರಾಯಣ ಠಾಣೆ ಪಿಎಸ್ಐ ಯೂನಸ್ ಗಡೇಕರ್ ಅವರನ್ನೊಳಗೊಂಡ ತಂಡ ಶೀಘ್ರ ಕಾರ್ಯ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದೆ.

