– ಲೆನಿನ್, ಕಾರ್ಲ್ಮಾರ್ಕ್ಸ್, ಹೋ ಚಿ ಮಿನ್ ರಸ್ತೆಗಳಿಗೆ ಹೊಸ ಹೆಸರು ಸೂಚನೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಹಲವು ರಸ್ತೆಗಳು, ಸೇತುವೆಗಳು ಹಾಗೂ ಸಾರ್ವಜನಿಕ ಸ್ಥಳಗಳ ಹೆಸರು ಬದಲಿಸುವ ಪ್ರಸ್ತಾವನೆಗಳನ್ನ ಪರಿಶೀಲಿಸಲು ರಾಜ್ಯ ಸರ್ಕಾರ ರಚಿಸಿರುವ 10 ಸದಸ್ಯರ ಸಮಿತಿ ಕಾರ್ಯಾರಂಭಿಸಿದೆ. ಕೋಲ್ಕತ್ತಾದ ಲೆನಿನ್ ರಸ್ತೆ, ಕಾರ್ಲ್ ಮಾರ್ಕ್ಸ್ ರಸ್ತೆ ಹಾಗೂ ಹೋ ಚಿ ಮಿನ್ ರಸ್ತೆ ಕೂಡ ಹೆಸರು ಬದಲಾವಣೆಯ ಪ್ರಸ್ತಾವನೆಗಳ ವ್ಯಾಪ್ತಿಯಲ್ಲಿವೆ.
ಭಾರತ ಸೇವಾಶ್ರಮ ಸಂಘದ ಸ್ವಾಮಿ ಪ್ರದೀಪ್ತಾನಂದ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಕೋಲ್ಕತ್ತಾ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರ ಪ್ರಕಾರ, ದುರ್ಗಾ ಪೂಜೆಯ (Durga Puja) ಬಳಿಕ ಸಮಿತಿಯ ಮೊದಲ ಸಭೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಕೋಲ್ಕತ್ತಾದ ರಸ್ತೆಗಳಿಗೆ ಹೆಸರು ಬದಲಿಸುವ ಪ್ರಸ್ತಾವನೆಗಳ ಕುರಿತು ಚರ್ಚೆ ನಡೆಯಲಿದೆ.
ಸದ್ಯ ಈವರೆಗೂ ಯಾವುದೇ ರಸ್ತೆಯ ಹೆಸರನ್ನ ಅಧಿಕೃತವಾಗಿ ಬದಲಿಸಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಸಮಿತಿಯ ಶಿಫಾರಸುಗಳ ಆಧಾರದ ಮೇಲೆಯೇ ಮುಂದೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳ ಹೆಸರುಗಳ ಹಿಂದೆ ಇರುವ ವ್ಯಕ್ತಿಗಳ ಪ್ರಸ್ತುತತೆ, ಭಾರತೀಯ ಹಾಗೂ ಬಂಗಾಳ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸವನ್ನ ಪರಿಗಣಿಸಲಾಗುವುದು ಎಂದು ಸ್ವಾಮಿ ಪ್ರದೀಪ್ತಾನಂದ ತಿಳಿಸಿದ್ದಾರೆ.

ತಥಾಗತ ರಾಯ್ರಿಂದ ಹಲವು ಹೆಸರುಗಳ ಸಲಹೆ
ಸಮಿತಿಯ ಸದಸ್ಯರಾಗಿರುವ ಮೇಘಾಲಯದ ಮಾಜಿ ರಾಜ್ಯಪಾಲ ತಥಾಗತ ರಾಯ್ ಅವರು ಲೆನಿನ್ ರಸ್ತೆಗೆ ಮಾಜಿ ಭಾರತೀಯ ಜನಸಂಘ ಅಧ್ಯಕ್ಷ ಹಾಗೂ ಗಣಿತಜ್ಞ ದೇಬಪ್ರಸಾದ್ ಘೋಷ್ ಅವರ ಹೆಸರು ಇಡುವಂತೆ ಸಲಹೆ ನೀಡಿದ್ದಾರೆ.
ಕಿಡರ್ಪುರದಲ್ಲಿರುವ ಕಾರ್ಲ್ ಮಾರ್ಕ್ಸ್ ರಸ್ತೆಗೆ ಬಂಗಾಳಿ ಕವಿ ಮೈಕೆಲ್ ಮಧುಸೂದನ್ ದತ್ತ ಅಥವಾ ರಂಗಲಾಲ್ ಬಂದ್ಯೋಪಾಧ್ಯಾಯ ಅವರ ಹೆಸರನ್ನು ಇಡುವಂತೆ ಸೂಚಿಸಿದ್ದಾರೆ. ಹೋ ಚಿ ಮಿನ್ ರಸ್ತೆಗೆ ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಹೆಸರು ಸೂಚಿಸಲಾಗಿದೆ.
ಲೆನಿನ್ ಪ್ರತಿಮೆ ತೆರವಿಗೂ ಸಲಹೆ
ಜವಾಹರಲಾಲ್ ನೆಹರು ರಸ್ತೆ ಹಾಗೂ ಸಿದ್ಧೋ-ಕಾನ್ಹು ದಹರ್ ಚೌಕದಲ್ಲಿರುವ ಲೆನಿನ್ ಪ್ರತಿಮೆಯನ್ನ ತೆರವುಗೊಳಿಸುವಂತೆಯೂ ತಥಾಗತ ರಾಯ್ ಸಲಹೆ ನೀಡಿದ್ದಾರೆ. ಕೋಲ್ಕತ್ತಾದ ಪ್ರಮುಖ ರಸ್ತೆಯೊಂದಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರು ಇಡುವಂತೆ ಅವರು ಪ್ರಸ್ತಾಪಿಸಿದ್ದಾರೆ. ಲೆನಿನ್ ಸರಣಿಗೆ ಈ ಹಿಂದೆ ‘ಧರ್ಮತಲಾ ಸ್ಟ್ರೀಟ್’ ಎಂಬ ಹೆಸರಿತ್ತು. 1970ರಲ್ಲಿ ಲೆನಿನ್ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಈ ರಸ್ತೆಗೆ ಲೆನಿನ್ ಸರಣಿ ಎಂದು ಹೆಸರು ಬದಲಿಸಲಾಗಿತ್ತು. ಅದೇ ರೀತಿ ಸರ್ಕ್ಯುಲರ್ ಗಾರ್ಡನ್ ರೀಚ್ ರಸ್ತೆಗೆ 1971ರಲ್ಲಿ ಕಾರ್ಲ್ ಮಾರ್ಕ್ಸ್ ಸರಣಿ ಎಂದು ಹೆಸರು ಇಡಲಾಗಿತ್ತು.
ಮುಸ್ಲಿಂ ಪ್ರಮುಖರ ಹೆಸರಿಗೂ ಸಲಹೆ
ಮುಸ್ಲಿಂ ವ್ಯಕ್ತಿಗಳ ಹೆಸರಿನಲ್ಲಿರುವ ಕೆಲವು ಸ್ಥಳಗಳ ಹೆಸರು ಬದಲಿಸುವ ಕುರಿತೂ ತಥಾಗತ ರಾಯ್ ಸಲಹೆ ನೀಡಿದ್ದಾರೆ. ಅವರು ರಾಷ್ಟ್ರವಾದಿ ಮುಸ್ಲಿಂ ಎಂದು ಉಲ್ಲೇಖಿಸಿರುವ ಲೇಖಕ ಖಾಜಿ ಅಬ್ದುಲ್ ವದುದ್, ಶಿಕ್ಷಣತಜ್ಞೆ ಬೇಗಂ ರುಕಯ್ಯಾ ಹಾಗೂ ಲೇಖಕ ಎಸ್. ವಾಜೆದ್ ಅಲಿ ಅವರ ಹೆಸರುಗಳನ್ನು ಪರ್ಯಾಯವಾಗಿ ಸೂಚಿಸಿದ್ದಾರೆ. ಕೋಲ್ಕತ್ತಾ ಸಮೀಪದ ಬರಾಸತ್ನಲ್ಲಿರುವ ತಿತೂಮೀರ್ ಹೆಸರಿನ ಬಸ್ ನಿಲ್ದಾಣಕ್ಕೂ ಈ ಹೆಸರುಗಳಲ್ಲಿ ಒಂದನ್ನು ಇಡುವಂತೆ ಸಲಹೆ ನೀಡಿದ್ದಾರೆ.

