– ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ನಿವೃತ್ತ ಅಧಿಕಾರಿ
ಚಂಡೀಘಡ: ಕಾರು ಪಾರ್ಕಿಂಗ್ ವಿಚಾರವಾಗಿ ನಡೆದ ವಿವಾದದಲ್ಲಿ ಕಾರ್ಗಿಲ್ ಯುದ್ಧದ ವೇಳೆ ಭಾರತೀಯ ವಾಯುಪಡೆಯ ‘ಆಪರೇಷನ್ ಸಫೇದ್ ಸಾಗರ್’ನ ಭಾಗವಾಗಿದ್ದ ನಿವೃತ್ತ ಗ್ರೂಪ್ ಕ್ಯಾಪ್ಟನ್ (Retired Airforce Officer) ಅಮಿತ್ ಕುಮಾರ್ ಗುಪ್ತಾ ಅವರ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಲಾಗಿದೆ.
ಸೆಪ್ಟೆಂಬರ್ 10ರ ರಾತ್ರಿ ಗುರುಗ್ರಾಮ್ನಲ್ಲಿ ಸೆಕ್ಟರ್-58ರ ಮ್ಯಾಗ್ನಮ್ ಗ್ಲೋಬಲ್ ಪಾರ್ಕ್ನಲ್ಲಿ ಘಟನೆ ನಡೆದಿದೆ.
ಅಮಿತ್ ಕುಮಾರ್ ಗುಪ್ತಾ ಅವರು ಕುಟುಂಬದೊಂದಿಗೆ ಗಾಂಜೋ ರೆಸ್ಟೋರೆಂಟ್ಗೆ ಊಟಕ್ಕೆ ತೆರಳಿದ್ದರು. ಕುಟುಂಬ ಸದಸ್ಯರನ್ನು ರೆಸ್ಟೋರೆಂಟ್ನ ಹೊರಗೆ ಇಳಿಸಿದ ಬಳಿಕ ಕಾರು ನಿಲುಗಡೆಗೆ ಸ್ಥಳ ಹುಡುಕುತ್ತಿದ್ದರು. ಈ ವೇಳೆ ಪಾರ್ಕಿಂಗ್ ಸಿಬ್ಬಂದಿ ಹಲವು ಸ್ಥಳಗಳಿಗೆ ಕಳುಹಿಸಿ ಬಳಿಕ ಕಾರು ನಿಲ್ಲಿಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಗುಪ್ತಾ ಅವರು ಕಾರನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದಾಗ ಪಾರ್ಕಿಂಗ್ ಸಿಬ್ಬಂದಿಯೊಬ್ಬರು ಕಾರಿನ ಗಾಜಿನ ಮೇಲೆ ಹೊಡೆದಿದ್ದಾರೆ. ಇದನ್ನು ಪ್ರಶ್ನಿಸಿದಾಗ ಸಿಬ್ಬಂದಿ ಕಬ್ಬಿಣದ ರಾಡ್ನಿಂದ ಅವರ ಕೈ ಹಾಗೂ ತಲೆಗೆ ಎರಡು ಬಾರಿ ಹೊಡೆದಿದ್ದಾನೆ ಎಂದು ಗುಪ್ತಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಯಿಂದ ಅವರ ತಲೆಯಿಂದ ರಕ್ತಸ್ರಾವವಾಗಿದ್ದು, ಕೈಗೆ ಗಂಭೀರ ಗಾಯವಾಗಿದೆ. ಮೊಣಕೈ ಮೂಳೆ ಮುರಿದಿದ್ದು, ಆಸ್ಪತ್ರೆಗೆ ದಾಖಲಾದ ಬಳಿಕ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಘಟನಾ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿ ತಮ್ಮನ್ನು ರಕ್ಷಿಸಲು ಮುಂದಾಗಲಿಲ್ಲ ಎಂದು ಗುಪ್ತಾ ಆರೋಪಿಸಿದ್ದಾರೆ. ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡಿದರೂ ಸುಮಾರು ಅರ್ಧ ಗಂಟೆಯವರೆಗೆ ನೆರವು ದೊರೆಯಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ರೆಸ್ಟೋರೆಂಟ್ನ ಶೆಫ್ ಒಬ್ಬರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಗಾಯಗೊಂಡ ಗುಪ್ತಾ ಅವರನ್ನು ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಮೊಣಕೈ ಮೂಳೆಯನ್ನು ಪ್ಲೇಟ್ ಅಳವಡಿಸುವ ಮೂಲಕ ಜೋಡಿಸಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದನ್ನೂ ಓದಿ: ಐಷಾರಾಮಿ ಬದುಕು ಬಿಟ್ಟು ಭಿಕ್ಷುಕನ ವೇಷ ಧರಿಸಿ ರಸ್ತೆಗಿಳಿದ ಬಿಜೆಪಿ ಶಾಸಕ ಪರಾಗ್ ಶಾ – ವೀಡಿಯೋ ವೈರಲ್
ಹಲ್ಲೆ ನಡೆಸಿದ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕೊಲೆ ಯತ್ನ ಸೇರಿದಂತೆ ಗಂಭೀರ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಬೇಕು ಎಂದು ಗುಪ್ತಾ ಪೊಲೀಸರನ್ನು ಒತ್ತಾಯಿಸಿದ್ದಾರೆ. ಆಸ್ಪತ್ರೆಯ ವೈದ್ಯಕೀಯ ವರದಿಯಲ್ಲೂ ತಮ್ಮ ಗಾಯಗಳ ಸರಿಯಾದ ವಿವರ ದಾಖಲಿಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜಾರಕಿಹೊಳಿ ಬಣಕ್ಕೆ ಶಾಕ್ ನೀಡಿ ಆಪ್ತನಿಗೆ ನಿರ್ದೇಶಕ ಪಟ್ಟ ಕೊಡಿಸಿದ ಸಚಿವ ಲಕ್ಷ್ಮಣ ಸವದಿ

