ನವದೆಹಲಿ: ಇಲ್ಲಿನ ಜಲ ಮಂಡಳಿಯ (Delhi Jal Board) ಒಳಚರಂಡಿ ಸಂಸ್ಕರಣಾ ಘಟಕ (ಎಸ್ಟಿಪಿ) ಯೋಜನೆ ಟೆಂಡರ್ ಅಕ್ರಮ ಸೇರಿದಂತೆ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆಮ್ ಆದ್ಮಿ ಪಕ್ಷದ (AAP) ನಾಯಕ ಮತ್ತು ಮಾಜಿ ಸಚಿವ ಸತ್ಯೇಂದರ್ ಜೈನ್ (Satyendar Jain) ಅವರಿಗೆ ರೌಸ್ ಅವೆನ್ಯೂ ನ್ಯಾಯಾಲಯವು ಜಾಮೀನು ನೀಡಿದೆ.
ದೆಹಲಿ ಸರ್ಕಾರದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಜೈನ್ ಅವರನ್ನು ಬಂಧಿಸಿತ್ತು. ಅವರು ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ (ಪಿಸಿ ಕಾಯ್ದೆ) ದಿಗ್ವಿನಯ್ ಸಿಂಗ್ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಫುಟ್ಪಾತ್ ರಸ್ತೆ ಪಾದಚಾರಿಗಳಿಗಷ್ಟೇ ಮೀಸಲು, ಅತಿಕ್ರಮಣಕ್ಕೆ ಅವಕಾಶವಿಲ್ಲ: ದೆಹಲಿ ಹೈಕೋರ್ಟ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಜೈನ್, ಇದು ಸತ್ಯದ ವಿಜಯವಾಗಿದೆ. ಕಳೆದ ಬಾರಿ ಇಡಿ ನನ್ನನ್ನು ಬಂಧಿಸಿದ ನಂತರ ನಾನು ಜೈಲಿನಲ್ಲಿದ್ದ ಮಧ್ಯಂತರ ಅವಧಿಯಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ. ಇದು ಕಟ್ಟುಕಥೆ ಪ್ರಕರಣ ಎಂದು ದೂಷಿಸಿದ್ದಾರೆ. ಇದೇ ವೇಳೆ ಫೆಡರಲ್ ತನಿಖಾ ಸಂಸ್ಥೆಗಳು ತಮ್ಮ ಮೇಲೆ ಏಕೆ ದಾಳಿ ನಡೆಸುತ್ತಿವೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ನಾನು ಇದರ ಬಗ್ಗೆ ಏನಾದರೂ ಹೇಳಬೇಕೇ? ನೀವು (ಮಾಧ್ಯಮಗಳು) ನನಗಿಂತ ಈ ಬಗ್ಗೆ ಚೆನ್ನಾಗಿ ತಿಳಿದಿದ್ದೀರಿ ಎಂದರು.
ದೆಹಲಿ ಎಎಪಿ ಅಧ್ಯಕ್ಷ ಸೌರಭ್ ಭಾರದ್ವಾಜ್ ಮಾತನಾಡಿ, ಬಿಜೆಪಿಯ ಆಪರೇಷನ್ ಪಂಜಾಬ್ ಇಂದು ವಿಫಲವಾಗಿದೆ. ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವಿನ ರಾಜಕೀಯ ಹೋರಾಟದ ಮೊದಲ ಸುತ್ತಿನಲ್ಲಿ, ಎಎಪಿ ಗೆದ್ದಿದೆ. ಪ್ರಕರಣವು ಸಂಪೂರ್ಣವಾಗಿ ಸುಳ್ಳಾಗಿದೆ. ಟೆಂಡರ್ಗಳು ಅಂಗೀಕರಿಸಲ್ಪಟ್ಟಾಗ ಜೈನ್ ಜೈಲಿನಲ್ಲಿದ್ದರು ಎಂದು ಅವರು ಒತ್ತಿ ಹೇಳಿದ್ದಾರೆ.
ವಿಜಿಲೆನ್ಸ್ ನಿರ್ದೇಶನಾಲಯದ ದೂರಿನ ನಂತರ ಮೇ 11, 2024 ರಂದು ದಾಖಲಾಗಿದ್ದ ಪ್ರಕರಣದಲ್ಲಿ ಆಗಸ್ಟ್ 18 ರಂದು ಜೈನ್ ಹಾಗೂ ಇತರ ಐದು ಮಂದಿಯನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಬಂಧಿಸಲಾದ ಇತರ ಆರೋಪಿಗಳೆಂದರೆ ದೆಹಲಿ ಜಲ ಮಂಡಳಿಯ ಮಾಜಿ ಸಿಇಒ ಮತ್ತು ಐಎಎಸ್ ಅಧಿಕಾರಿ ಉದಿತ್ ಪ್ರಕಾಶ್ ರೈ, ಮಾಜಿ ಗುತ್ತಿಗೆ ಸಲಹೆಗಾರ ಅಂಕಿತ್ ಶ್ರೀವಾಸ್ತವ, ಎಎನ್ ಎಂಟರ್ಪ್ರೈಸಸ್ ಮಾಲೀಕ ನಾಗೇಂದ್ರ ಯಾದವ್, ಯುರೋಟೆಕ್ ಎನ್ವಿರಾನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮಾಲೀಕ ರಾಜ ಕುಮಾರ್ ಕುರ್ರಾ ಮತ್ತು ಶ್ರೀಜನ್ಹಾರ್ ಮಾಲೀಕ ಪಂಕಜ್ ವರ್ಮಾ ಸೇರಿದ್ದಾರೆ.
2022 ರಲ್ಲಿ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಜೈನ್ ಬಂಧಿಸಲ್ಪಟ್ಟಿದ್ದರು ಮತ್ತು 2024 ರಲ್ಲಿ ಜಾಮೀನು ಪಡೆಯುವಾಗ ತಿಂಗಳುಗಳ ಕಾಲ ಕಸ್ಟಡಿಯಲ್ಲಿದ್ದರು. ಇದಾದ ಬಳಿಕ ಆ. 18ರಂದು ಮತ್ತೆ ಅವರನ್ನು ಬಂಧಿಸಲಾಗಿತ್ತು. ಇದೀಗ 2 ಲಕ್ಷ ರೂ. ಬಾಂಡ್ ಭದ್ರತೆ ಮೇಲೆ ಕೋರ್ಟ್ ಜಾಮೀನು ನೀಡಿದೆ. ಇದನ್ನೂ ಓದಿ: ಮದ್ರಾಸ್ ಹೈಕೋರ್ಟ್ನಲ್ಲಿ ಸ್ಟಾಲಿನ್ಗೆ ಮುಖಭಂಗ
