ಬೆಂಗಳೂರು: ತೀವ್ರ ವಿಚಾರಣೆ ಬಳಿಕ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಅವರನ್ನು ಸೈಬರ್ ಕ್ರೈ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲಂಚ ಕೊಟ್ಟು ಮುಡಾ ಮಾಜಿ ಆಯುಕ್ತ ನಟೇಶ್ ಮುಂಬಡ್ತಿ ಪಡೆದುಕೊಂಡಿದ್ದಾರೆಂಬ ಆಡಿಯೋ ಸೋಶಿಯಲ್ ಮೀಡಿಯಾವನ್ನು ಸ್ನೇಹಮಯಿ ಕೃಷ್ಣ ವೈರಲ್ ಮಾಡಿದ್ದರು. ವೈರಲ್ ಮಾಡಿ ಅಪಪ್ರಚಾರ ಮಾಡಲಾಗಿದೆ ಎಂದು ಸೈಬರ್ ಕ್ರೈಂ ಪೊಲೀಸರಿಗೆ ನಟೇಶ್ ದೂರು ನೀಡಿದ್ದರು. ಇದನ್ನೂ ಓದಿ: ಮುಡಾ ಹಗರಣದ ದೂರುದಾರನೇ ಅರೆಸ್ಟ್ – ಸ್ನೇಹಮಯಿ ಕೃಷ್ಣ ಮನೆ, ಕಚೇರಿ ಮೇಲೆ ದಾಳಿ
ನಟೇಶ್ ಕೊಟ್ಟ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ, ಆಡಿಯೋ ಸೃಷ್ಟಿ ಮಾಡಿದ್ದ ಮೈಸೂರು ಮೂಲದ ವಿನೋದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ಪ್ರಕರಣದ ಆರೋಪಿಯಾಗಿರುವ ಸ್ನೇಹಮಯಿ ಕೃಷ್ಣರನ್ನ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದರು.
ಆಡಿಯೋ ಮಾಡಿದವರು ಯಾರು? ಅಸಲಿ ಆಡಿಯೋ ಅಂದರೆ ಅದನ್ನ ನಿಮಗೆ ಕೊಟ್ಟವರು ಯಾರು? ಹೀಗೆ ಸಾಲು ಸಾಲು ಪ್ರಶ್ನೆಗಳನ್ನ ಮಾಡಿ ಸ್ನೇಹಮಯಿಯಿಂದ ಉತ್ತರ ಪಡೆದುಕೊಳ್ಳುವ ಕೆಲಸ ಮಾಡಿದ್ದಾರೆ. ಸುದೀರ್ಘ ವಿಚಾರಣೆ ಮಾಡಿದ ಸೈಬರ್ ಕ್ರೈಂ ಪೊಲೀಸರು, ಆರ್ಟಿಐ ಕಾರ್ಯಕರ್ತನನ್ನು ಬಿಟ್ಟು ಕಳುಹಿಸಿದ್ದಾರೆ. ಇದನ್ನೂ ಓದಿ: ಮುಡಾ ಪ್ರಕರಣದ ರುವಾರಿ ಸ್ನೇಹಮಯಿ ಕೃಷ್ಣ ಅರೆಸ್ಟ್
ಆಡಿಯೋ ಸೃಷ್ಟಿ ಮಾಡಿದ್ದ ಆರೋಪಿ ವಿನೋದ್ನನ್ನು ಕೋರ್ಟ್ಗೆ ಹಾಜರುಪಡಿಸಿ, ಪ್ರಕರಣ ಸಂಬಂಧ ಮತ್ತಷ್ಟು ವಿಚಾರಣೆ ಅವಶ್ಯಕತೆ ಇದೆ ಎಂದು ಕಸ್ಟಡಿಗೆ ಪಡೆಯಲು ಸೈಬರ್ ಕ್ರೈಂ ಪೊಲೀಸರು ಮುಂದಾಗಿದ್ದಾರೆ.

