ಕೊಪ್ಪಳ: ಗಂಗಾವತಿ (Gangavathi) ತಾಲೂಕಿನ ಆನೆಗೊಂದಿ (Anegondi) ಗ್ರಾಮದ ನವಬೃಂದಾವನ ಗಡ್ಡೆಯಲ್ಲಿ ಶ್ರೀರಘುವರ್ಯ ತೀರ್ಥರ ಮಧ್ಯಾರಾಧನೆಯ ಮಹೋತ್ಸವವನ್ನು ಶನಿವಾರ ನೆರವೆರಿಸಲಾಯಿತು.ಇದನ್ನೂ ಓದಿ: ವಿಮಾನ ದುರಂತ ಸ್ಥಳಕ್ಕೆ ಭೇಟಿ – ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಮಲ್ಲಿಕಾರ್ಜುನ ಖರ್ಗೆ
ಉತ್ತರಾಧಿ ಮಠದ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ಶಿವಮೊಗ್ಗದ ಆರ್ಯ ಅಕ್ಷೋಭ್ಯ ತೀರ್ಥ ಮಠದ ಮಠಾಧೀಶರಾದ ರಘುವಿಜಯ ತೀರ್ಥರ ಸಾನಿಧ್ಯದಲ್ಲಿ ಮಧ್ಯಾರಾಧನೆ ಮಹೋತ್ಸವ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಧ್ಯಾರಾಧನೆಯ ಅಂಗವಾಗಿ ರಘುವರ್ಯ ತೀರ್ಥರ ಮೂಲಬೃಂದಾವನಕ್ಕೆ ನಿರ್ಮೂಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ರೇಷ್ಮೆ ವಸ್ತ್ರಗಳ ಸಮರ್ಪಣೆ, ವಿವಿಧ ಪುಷ್ಪಗಳ ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ನಾನಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ಉತ್ತರಾಧಿ ಮಠದ ಶ್ರೀಗಳಾದ ಸತ್ಯಾತ್ಮ ತೀರ್ಥ ಶ್ರೀಗಳಿಂದ ಭಕ್ತರಿಗೆ ತಪ್ತಮುದ್ರಾಧಾರಣೆ, ಸಂಸ್ಥಾನ ಪೂಜೆ, ಹಸ್ತೋದಕ ಪೂಜೆಗಳನ್ನು ನಡೆಸಲಾಯಿತು.
ನಂತರ ಸತ್ಯಾತ್ಮ ತೀರ್ಥ ಶ್ರೀಗಳು ಮಾತನಾಡಿ, ನವಬೃಂದಾವನ ಗಡ್ಡೆಯಲ್ಲಿ ಬೃಂದಾವನರಾಗಿರುವ ಶ್ರೀ ರಘುವರ್ಯ ತೀರ್ಥರು ತೋರಿಸಿಕೊಟ್ಟ ಮಾರ್ಗದಲ್ಲಿ, ಸಾಧಿಸಿದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು. ಅವರ ಸಂದೇಶಗಳನ್ನು ಆಚರಣೆಗೆ ತರಬೇಕು. ಸುಧಾ-ಸರ್ವಮೂಲ ಗ್ರಂಥಗಳ ಅಧ್ಯಯನದ ಮೂಲಕ ಜೀವನ ಪಾವನಗೊಳಿಸಿಕೊಳ್ಳಬೇಕು. ನವಬೃಂದಾವನ ಗಡ್ಡೆ ಒಂದು ಪರಮ ಪವಿತ್ರ ತಾಣವಾಗಿದ್ದು, ಇಲ್ಲಿನ ಯತಿಗಳ ಆರಾಧನೆಯಲ್ಲಿ ಭಾಗವಹಿಸುವ ಮೂಲಕ ಅವರ ಆಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಹೇಳಿದರು. ಮಠದ ದಿವಾನ ಪಂಡಿತ ಶಶಿಧರ ಚಾರ್ಯರು, ಉಮರ್ಜಿ ಶ್ರೀಕರಾಚಾರ್ಯರು, ಮಹಿಷಿ ಆನಂದ ಆಚಾರ್ಯ, ನರಸಿಂಹ ಆಚಾರ್ಯ, ಜ್ಯೋತಿಷ್ಯ ವಿದ್ವಾಂಸ ಪ್ರಸನ್ನಾಚಾರ್ಯ ಕಟ್ಟಿ, ಮಠದ ವ್ಯವಸ್ಥಾಪಕ ಆನಂದ ಆಚಾರ್ಯ ಹಾಗೂ ಇತರರಿದ್ದರು.ಇದನ್ನೂ ಓದಿ: 11A ಸೀಟ್ ಮಿಸ್ಟರಿ – 2 ವಿಮಾನ ಪತನ, ಒಂದೇ ಕಡೆ ಕುಳಿತಿದ್ದ ಇಬ್ಬರು ಮೃತ್ಯುಂಜಯರು!