– ನನ್ನ ವಿರುದ್ಧ 5 ಕೇಸ್ಗಳು ದಾಖಲು
– ಸಿದ್ದರಾಮಯ್ಯ ಸಿಎಂ ಆದ ಮೇಲೆ ದಾಖಲಾದ ಕೇಸ್
ಬೆಂಗಳೂರು: ನನ್ನ ಮೇಲೆ ಒಂದೇ ಒಂದು ಕೋಮುದ್ವೇಷದ ಪ್ರಕರಣವಿಲ್ಲ. ಆರ್ಸಿಬಿ ಕಾಲ್ತುಳಿತವನ್ನು (RCB Stampede) ಮರೆಸಲು ಜನರ ಮೂಡ್ ಡೈವರ್ಟ್ ಮಾಡಲು ಸರ್ಕಾರ ಹೀಗೆ ಮಾಡುತ್ತಿರಬಹುದು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಹೇಳಿದ್ದಾರೆ.
ತನ್ನ ವಿರುದ್ಧ ಪೊಲೀಸ್ ಇಲಾಖೆ (Police Department) ಪ್ರಕರಣಗಳ ಬಗ್ಗೆ ಮಾಹಿತಿ ಕೇಳಿದ್ದಕ್ಕೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಇದು ಕಾಂಗ್ರೆಸ್ (Congress) ಚಾಳಿಯಾಗಿದ್ದು ಹೊಸದೇನು ಅಲ್ಲ. ಸಿದ್ದರಾಮಯ್ಯ ಸರ್ಕಾರ ಹೆದರಿಕೊಂಡಿದ್ದು ಜಿಲ್ಲೆಗಳಿಗೆ ಹೋಗದಂತೆ ನಿರ್ಬಂಧ ಮಾಡಿ ಗೂಂಡಾ ಕಾಯ್ದೆ ಹಾಕಲು ಪ್ರಯತ್ನ ನಡೆಯುತ್ತಿರಬಹುದು ಎಂದು ತಿಳಿಸಿದರು.
ನನ್ನ ಧ್ವನಿಯನ್ನು ಕಡಿಮೆ ಮಾಡಲು ಸರ್ಕಾರ ಈ ರೀತಿ ಮಾಡುತ್ತಿದೆ. ಇದಕ್ಕೆ ನಾನು ಹೆದರುವ ಜನ ನಾವಲ್ಲ. ಕಾಂಗ್ರೆಸ್ಗೆ ಮುಂದಿನ ದಿನಗಳಲ್ಲಿ ನಾನು ತೊಡಕಾಗಬಹುದು ಎಂಬ ಆತಂಕವಿದೆ. 2022-25 ರ ನನ್ನ ವಿರುದ್ಧದ ಪ್ರಕರಣಗಳ ಬಗ್ಗೆ ಕಷ್ಟ ಪಡುವ ಅಗತ್ಯವಿಲ್ಲ. ನಾನೇ ನನ್ನ ಕೇಸುಗಳ ಮಾಹಿತಿ ಕೊಡುತ್ತೇನೆ. ಕಾಂಗ್ರೆಸ್ ಸರ್ಕಾರ ಅದೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಆಗಿರುವ ಎಫ್ಐಆರ್ಗಳು ಎಂದು ಹೇಳಿದರು.
ನನ್ನ ಬಗ್ಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಭಯ ಇದ್ದು ಒಟ್ಟು 5 ಕೇಸ್ಗಳು ದಾಖಲಾಗಿವೆ. ಎರಡು ಕೇಸ್ ಶಿವಮೊಗ್ಗದಲ್ಲಿ ದಾಖಲಾದರೆ ಇನ್ನು ಎರಡು ಟ್ವೀಟ್ಗೆ ಸಂಬಂಧಿಸಿದಂತೆ ದಾಖಲಾಗಿದೆ. ಸಿದ್ದರಾಮಯ್ಯ ವಿರುದ್ಧ ಮಾತನಾಡಿದ್ದಕ್ಕೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರ ಆಸ್ತಿಗೆ ಸಂಬಂಧಪಟ್ಟಂತೆ ಅರೋಗ್ಯ ಪದ ಬಳಕೆ ಮಾಡಿದ್ದೆ. ಅಯೋಗ್ಯ ಪದಕ್ಕೆ ಜಾತಿ ನಿಂದನೆ ಕೇಸ್ ಹಾಕಿದ್ದು ಇದು ಸುಪ್ರೀಂ ಕೋರ್ಟ್ನಲ್ಲಿದೆ ಎಂದರು.
ನಾನು ಇತಿಹಾಸ ಅಷ್ಟೇ ಮಾತನಾಡುತ್ತೇನೆ. ಮಹಮ್ಮದ್ ಘಜ್ನಿ, ಘೋರಿ ಬಗ್ಗೆ ಮಾತನಾಡಿದರೆ ಮುಸ್ಲಿಮರಿಗೆ ಮಾತನಾಡಿದ್ದು ಎಂದರೆ ಹೇಗೆ ಎಂದು ಪ್ರಶ್ನಿಸಿದರು.