– ನಮಗೂ ಪರಿಹಾರ ನೀಡಿ ಎಂದು ಮನವಿ
ಬೆಂಗಳೂರು: ಆರ್ಸಿಬಿ (RCB) ಸಂಭ್ರಮಾಚರಣೆಯಲ್ಲಿನ ಭೀಕರ ಕಾಲ್ತುಳಿತ (Chinnaswamy Stampede) ಪ್ರಕರಣದಲ್ಲಿ ದಾರುಣವಾಗಿ ಸಾವನ್ನಪ್ಪಿದವರ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ಸೇರಿ ಒಟ್ಟು 40 ಲಕ್ಷ ಪರಿಹಾರ ಘೋಷಿಸಲಾಗಿದೆ. ಆದರೆ ಗಂಭೀರ ಗಾಯಗೊಂಡವರಿಗೆ ಯಾವುದೇ ಪರಿಹಾರ (Compensation) ಘೋಷಣೆ ಮಾಡಿಲ್ಲ. ಇದಕ್ಕೆ ಈಗ ವಿರೋಧ ವ್ಯಕ್ತವಾಗುತ್ತಿದೆ.
ಆರ್ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಸತ್ತವರಿಗಷ್ಟೇ ಪರಿಹಾರ ಘೋಷಣೆ ಮಾಡಿರುವ ಸರ್ಕಾರ, ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಗಾಯಗೊಂಡವರು ಬೇಸರ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಚಿಕಿತ್ಸಾ ವೆಚ್ಚ ಅಂದ್ರು, ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಬೇಕು. ಡಿಸ್ಚಾರ್ಜ್ ಆದ್ರೂ ಕನಿಷ್ಟ ಮೂರು ತಿಂಗಳು ಚಿಕಿತ್ಸೆ ಪಡೀಬೇಕು. ಜೊತೆಗೆ ಏನೂ ಕೆಲಸ ಮಾಡಲಾರದ ಪರಿಸ್ಥಿತಿ ಇದೆ. ನಮಗೂ ಪರಿಹಾರ ನೀಡಿ ಎಂದು ಗಾಯಾಳುಗಳು ಮನವಿ ಮಾಡುತ್ತಿದ್ದಾರೆ.
ಇನ್ನು ಗಾಯಾಳುಗಳ ಪರಿಸ್ಥಿತಿ ಕೇಳೋರಿಲ್ಲ. ಬರೀ ಘಟನೆ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ರೆ ಮುಂದಿನ ಪರಿಸ್ಥಿತಿ ಬಗ್ಗೆ ನೆನೆಸಿಕೊಂಡರೆ ಆತಂಕವಾಗುತ್ತದೆ. ಕೇವಲ ಸರ್ಕಾರ ಸತ್ತವರಿಗಷ್ಟೇ ಪರಿಹಾರದ ಹಣ ಘೋಷಣೆ ಮಾಡಿದ್ದಾರೆ. ನಮ್ಮ ಜೀವಕ್ಕೆ ಬೆಲೆ ಇಲ್ವಾ? ಕೇವಲ ಚಿಕಿತ್ಸೆ ಕೊಟ್ಟು ಮನೆಗೆ ಕಳುಹಿಸಿದರೆ, ನಂತರದ ಚಿಕಿತ್ಸೆಗಳಿಗೆ ತುಂಬಾ ಕಷ್ಟ ಆಗುತ್ತದೆ. ದಯಮಾಡಿ ಸರ್ಕಾರ, ಆರ್ಸಿಬಿ ಮ್ಯಾನೇಜ್ಮೆಂಟ್ ಹಾಗೂ ಕೆಎಸ್ಸಿಎನವರು ನಮಗೂ ಸಹ ಪರಿಹಾರ ಕೊಡಲಿ ಎಂದು ಅಳಲು ತೋಡಿಕೊಂಡಿದ್ದಾರೆ.
ಮುಂದಿನ ಮೂರು ತಿಂಗಳು ಬೆಡ್ ರೆಸ್ಟ್ ಹೇಳಿದ್ದಾರೆ. ಆದರೆ ನಾವು ಪಾರ್ಟ್ಟೈಮ್ ಕೆಲಸ ಮಾಡುತ್ತಾ ಕಾಲೇಜಿಗೆ ಹೋಗುತ್ತಿದ್ದೆವು. ಆದ್ರೆ ಮೂರು ತಿಂಗಳು ಕೆಲಸ ಇಲ್ಲದೆ ಜೀವನ ಸಾಗಿಸೋದು ತುಂಬಾ ಕಷ್ಟ. ಮೆಡಿಸಿನ್ಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಆಗುತ್ತೆ ಎಂದು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ನೋವಿನ ಮಾತನ್ನು ಆಡಿದ್ದಾರೆ.
ಇನ್ನು ಕ್ಯಾಮೆರಾ ಮುಂದೆ ಮಾತನಾಡಿದ್ರೆ ನಮ್ಮ ಜೀವನ ಎಲ್ಲಿ ಹಾಳಾಗುತ್ತೆ, ಸಂಬಂಧಿಕರು ಏನು ತಿಳಿದುಕೊಳ್ಳುತ್ತಾರೆ, ನಮಗೆ ಮುಂದೆ ಕೆಲಸ ಸಿಗುತ್ತಾ? ನಮ್ಮನ್ನ ಯಾರು ಮದುವೆ ಆಗ್ತಾರೆ? ಹೀಗೆ ನಾನಾ ಪ್ರಶ್ನೆಗಳು ಗಾಯಾಳುಗಳನ್ನ ಕಾಡುತ್ತಿದೆ. ಹೀಗಾಗಿ ಕ್ಯಾಮೆರಾ ಮುಂದೆ ಮಾತನಾಡಲು ಗಾಯಾಳುಗಳು ಹಾಗೂ ಅವರ ಕುಟುಂಬದವರು ಹಿಂದೇಟು ಹಾಕುತ್ತಿದ್ದಾರೆ.