ನವದೆಹಲಿ: ಉರ್ದು ಭಾಷೆಯು (Urdu Language) ಭಾರತದಲ್ಲಿ ಜನ್ಮತಾಳಿದ್ದು, ಇದನ್ನು ಯಾವುದೇ ಧರ್ಮದೊಂದಿಗೆ ಸಂಬಂಧಿಸುವುದು ತಪ್ಪು ಎಂದು ಸುಪ್ರೀಂ ಕೋರ್ಟ್ (Supreme Court) ಐತಿಹಾಸಿಕ ತೀರ್ಪು ನೀಡಿದೆ. ಮಹಾರಾಷ್ಟ್ರದ (Maharastra) ಅಕೋಲಾ ಜಿಲ್ಲೆಯ ಪಾತೂರ್ ಪುರಸಭೆಯ ಸೂಚನಾ ಫಲಕದಲ್ಲಿ ಉರ್ದು ಭಾಷೆಯ ಬಳಕೆಯನ್ನು ಎತ್ತಿಹಿಡಿದ ಕೋರ್ಟ್, ಭಾಷೆಯು ಧರ್ಮವನ್ನು ಪ್ರತಿನಿಧಿಸುವುದಿಲ್ಲ, ಬದಲಿಗೆ ಸಂಸ್ಕೃತಿಯ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದೆ.
ನ್ಯಾ. ಸುಧಾಂಶು ಧುಲಿಯಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು, ಮಾಜಿ ಕೌನ್ಸಿಲರ್ ವರ್ಷಾತಾಯಿ ಸಂಜಯ್ ಬಗಾಡೆ ಅವರು ದಾಖಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು. ಪಾತೂರ್ (Patur) ಪುರಸಭೆಯ ಹೊಸ ಕಟ್ಟಡದ ಸೂಚನಾ ಫಲಕದಲ್ಲಿ ಉರ್ದು ಬಳಕೆಯನ್ನು ಪ್ರಶ್ನಿಸಿದ್ದ ಬಗಾಡೆ, ಇದಕ್ಕೆ ಕಾನೂನು ಆಧಾರವಿಲ್ಲ ಎಂದು ವಾದಿಸಿದ್ದರು. ಆದರೆ, 2021ರಲ್ಲಿ ಬಾಂಬೆ ಹೈಕೋರ್ಟ್ ಈ ಬಳಕೆಯನ್ನು ಸಮರ್ಥಿಸಿತ್ತು ಮತ್ತು ಈಗ ಸುಪ್ರೀಂಕೋರ್ಟ್ ಆ ತೀರ್ಪನ್ನು ಎತ್ತಿಹಿಡಿದಿದೆ. ಇದನ್ನೂ ಓದಿ: ಮಲ್ಪೆಯ ಟಾಯ್ಲೆಟ್ನಲ್ಲಿ ನವಜಾತ ಶಿಶುವಿನ ಶವ ಪತ್ತೆ
ಉರ್ದು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ
ತೀರ್ಪಿನಲ್ಲಿ, ಉರ್ದು ಭಾಷೆಯು ಭಾರತದ ಗಂಗಾ-ಜಮುನಿ ತಹಜೀಬ್ನ (ಹಿಂದೂಸ್ತಾನಿ ಸಂಸ್ಕೃತಿಯ) ಉತ್ತಮ ಮಾದರಿಯಾಗಿದೆ ಎಂದು ಕೋರ್ಟ್ ಒತ್ತಿ ಹೇಳಿದೆ. ಉರ್ದು ಭಾರತದಲ್ಲಿ ಜನ್ಮತಾಳಿದ ಭಾಷೆಯಾಗಿದ್ದು, ಇದು ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ. ಭಾಷೆಯನ್ನು ಧರ್ಮದೊಂದಿಗೆ ಗುರುತಿಸುವುದು ನಮ್ಮ ತಪ್ಪು ಊಹೆಗಳು ಮತ್ತು ಕೆಲವೊಮ್ಮೆ ಪೂರ್ವಾಗ್ರಹಗಳಿಂದ ಕೂಡಿದೆ ಎಂದು ನ್ಯಾಯಾಲಯ ತಿಳಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯನವರೇ ನಿಮ್ಮನೆಗೆ ಜಾತಿಗಣತಿ ಸಮೀಕ್ಷೆ ಮಾಡಲು ಯಾರು ಬಂದಿದ್ರು? – ಶೋಭಾ ಕರಂದ್ಲಾಜೆ
ಕೋರ್ಟ್ ಇದೇ ವೇಳೆ ಉರ್ದು ಮತ್ತು ಹಿಂದಿ ಭಾಷೆಗಳ ಐತಿಹಾಸಿಕ ಸಂಬಂಧವನ್ನು ಉಲ್ಲೇಖಿಸಿತು. ಈ ಎರಡೂ ಭಾಷೆಗಳು ಒಂದೇ ಮೂಲದಿಂದ ಬೆಳೆದವು. ಆದರೆ ಕಾಲಾಂತರದಲ್ಲಿ ಧಾರ್ಮಿಕ ಗುರುತುಗಳಿಂದ ಬೇರ್ಪಡಿಸಲ್ಪಟ್ಟವು. ಹಿಂದಿಯನ್ನು ಹಿಂದೂಗಳ ಭಾಷೆ ಮತ್ತು ಉರ್ದುವನ್ನು ಮುಸ್ಲಿಮರ ಭಾಷೆ ಎಂದು ಗುರುತಿಸುವುದು ವಾಸ್ತವದಿಂದ ದೂರವಾದ ದಾರಿ ಎಂದು ಕೋರ್ಟ್ ವಿಷಾದ ವ್ಯಕ್ತಪಡಿಸಿತು.
ಸ್ಥಳೀಯ ಸಮುದಾಯದ ಅಗತ್ಯಕ್ಕೆ ಆದ್ಯತೆ
ಪಾತೂರ್ ಪುರಸಭೆಯ ಸೂಚನಾ ಫಲಕದಲ್ಲಿ ಉರ್ದು 1956ರಿಂದಲೂ ಬಳಕೆಯಲ್ಲಿದೆ ಮತ್ತು ಸ್ಥಳೀಯ ಜನಸಮುದಾಯದ ಗಣನೀಯ ಭಾಗವು ಈ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತದೆ ಎಂದು ಕೋರ್ಟ್ ಗಮನಿಸಿದೆ. ಪುರಸಭೆಯು ಸ್ಥಳೀಯ ಜನರ ದೈನಂದಿನ ಅಗತ್ಯಗಳನ್ನು ಪೂರೈಸುವ ಉದ್ದೇಶ ಹೊಂದಿದೆ. ಒಂದು ವೇಳೆ ಜನರ ಗುಂಪು ಉರ್ದು ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ, ಅದನ್ನು ಮರಾಠಿಯ ಜೊತೆಗೆ ಸೂಚನಾ ಫಲಕದಲ್ಲಿ ಬಳಸುವುದಕ್ಕೆ ಯಾವುದೇ ಆಕ್ಷೇಪವಿರಬಾರದು ಎಂದು ಕೋರ್ಟ್ ತಿಳಿಸಿದೆ. ಇದನ್ನೂ ಓದಿ: ರಜನಿಕಾಂತ್ ನಟನೆಯ ‘ಜೈಲರ್ 2’ನಲ್ಲಿಯೂ ನಟಿಸಲಿದ್ದಾರೆ ಶಿವಣ್ಣ
ಮಹಾರಾಷ್ಟ್ರ ಸ್ಥಳೀಯ ಪ್ರಾಧಿಕಾರಗಳ (ಅಧಿಕೃತ ಭಾಷೆ) ಕಾಯಿದೆ, 2022ರ ಪ್ರಕಾರ, ಉರ್ದು ಬಳಕೆಗೆ ಯಾವುದೇ ಕಾನೂನು ನಿಷೇಧವಿಲ್ಲ ಎಂದು ಬಾಂಬೆ ಹೈಕೋರ್ಟ್ ತನ್ನ 2021ರ ತೀರ್ಪಿನಲ್ಲಿ ತಿಳಿಸಿತ್ತು. ಈ ತೀರ್ಪನ್ನು ಒಪ್ಪಿಕೊಂಡ ಸುಪ್ರೀಂಕೋರ್ಟ್, ವರ್ಷಾತಾಯಿ ಬಗಾಡೆ ಅವರಿಗೆ ಈ ರೀತಿಯ ಆಕ್ಷೇಪಣೆ ಎತ್ತುವ ಕಾನೂನು ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿತು. ಕೇವಲ ಪುರಸಭೆಯ ಮುಖ್ಯಾಧಿಕಾರಿಗೆ ಮಾತ್ರ ಇಂತಹ ವಿಷಯದಲ್ಲಿ ಕ್ರಮ ಕೈಗೊಳ್ಳುವ ಅಧಿಕಾರವಿದೆ ಎಂದು ಕೋರ್ಟ್ ತಿಳಿಸಿದೆ. ಇದನ್ನೂ ಓದಿ: ಉದ್ಯೋಗ ನೀಡದ ಮೋದಿಯಿಂದ ಸುಳ್ಳು ಹೇಳಿಕೆ-ಕಲ್ಯಾಣ ಕರ್ನಾಟಕಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಬದ್ಧ: ಸಿಎಂ
ಸಾಮಾಜಿಕ ಸಂದೇಶ
ತೀರ್ಪಿನ ಆರಂಭದಲ್ಲಿ, ನ್ಯಾಯಮೂರ್ತಿ ಧುಲಿಯಾ ಅವರು ಆಂಗ್ಲೋ-ಅಲ್ಜೀರಿಯನ್ ಲೇಖಕ ಮೌಲೌದ್ ಬೆಂಜಾದಿ ಅವರ ಉಕ್ತಿಯನ್ನು ಉಲ್ಲೇಖಿಸಿದರು. ಒಂದು ಭಾಷೆಯನ್ನು ಕಲಿಯುವಾಗ, ನೀವು ಕೇವಲ ಮಾತನಾಡಲು ಮತ್ತು ಬರೆಯಲು ಕಲಿಯುವುದಿಲ್ಲ. ನೀವು ಮುಕ್ತಮನಸ್ಸು, ಉದಾರವಾದ, ಸಹಿಷ್ಣು, ದಯೆಯಿಂದ ಕೂಡಿದ ಮತ್ತು ಎಲ್ಲರಿಗೂ ಗೌರವ ನೀಡುವ ಮನೋಭಾವವನ್ನು ಕಲಿಯುತ್ತೀರಿ. ಈ ಮಾತಿನ ಮೂಲಕ ಕೋರ್ಟ್, ಭಾಷೆಯು ಒಗ್ಗಟ್ಟನ್ನು ಬೆಳೆಸುವ ಸಾಧನವಾಗಿದೆ ಎಂಬ ಸಂದೇಶವನ್ನು ಸಾರಿದೆ.