ನವದೆಹಲಿ: ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿ ಹೊರಬಂದಿರುವ 41 ಕಾರ್ಮಿಕರ ಆರೋಗ್ಯವು (41 Workers Health) ಉತ್ತಮವಾಗಿದ್ದು, ಅವರಿನ್ನು ಮನೆಗೆ ಹೋಗಬಹುದು ಎಂದು ಏಮ್ಸ್ ಆಸ್ಪತ್ರೆಯ (AIIMS Hospital) ವೈದ್ಯರು ತಿಳಿಸಿದ್ದಾರೆ.
40 ಮಂದಿ ಕಾರ್ಮಿಕರು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೋರ್ವನಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಕೂಡ ಆದಷ್ಟು ಬೇಗ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ
ಈ ಸಂಬಂಧ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಏಮ್ ಆಸ್ಪತ್ರೆ, ಸಿಲ್ಕ್ಯಾರಾ ಸುರಂಗದಿಂದ (Silkyara-Barkot Tunnel) ಸುರಕ್ಷಿತವಾಗಿ ರಕ್ಷಣೆಗೊಂಡ ಬಳಿಕ ಎಲ್ಲಾ 41 ಮಂದಿ ಕಾರ್ಮಿಕರು ಏಮ್ಸ್-ರಿಷಿಕೇಶ್ ಆಸ್ಪತ್ರೆಗೆ ಬುಧವಾರ ಮಧ್ಯಾಹ್ನ ದಾಖಲಾಗಿದ್ದಾರೆ. ಪ್ರಾಥಮಿಕ ತಪಾಸಣೆಯ ವೇಳೆ ಈ ಕಾರ್ಮಿಕರ ಮೈಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ. ನಂತರ ಅವರನ್ನು ತೀವ್ರ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಅವರ ರಕ್ತ ಪರೀಕ್ಷೆಗಳು, ಮೂತ್ರಪಿಂಡ, ಇಸಿಜಿ ವರದಿಗಳು, ಯಕೃತ್ತಿನ ಕಾರ್ಯ ಪರೀಕ್ಷೆ ಮತ್ತು ಎಕ್ಸ್ ರೇನಲ್ಲಿ ಎಲ್ಲರೂ ದೈಹಿಕವಾಗಿ ಸ್ಥಿರರಾಗಿದ್ದಾರೆ ಎಂದು ತಿಳಿಸಿದರು.
40 ಕಾರ್ಮಿಕರಲ್ಲಿ ಒಬ್ಬರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಅವರನ್ನು ಹೆಚ್ಚಿನ ತಪಾಸಣೆಗಾಗಿ ಡಿಸಾಸ್ಟರ್ ವಾರ್ಡ್ನಿಂದ ಹೃದ್ರೋಗ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಆದರೆ ಇದು ಸುರಂಗ ಕುಸಿತ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಎಲ್ಲಾ ಕಾರ್ಮಿಕರ ಆರೋಗ್ಯದ ಬಗ್ಗೆ ಆಸ್ಪತ್ರೆಯು ಕ್ಲಿಯರೆನ್ಸ್ ನೀಡಿದ್ದು, ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಬಹುದು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ 41 ಜನರ ಪೈಕಿ 15 ಮಂದಿ ಏಮ್ಸ್ ನಿಂದ ತಮ್ಮ ಊರಾದ ಜಾರ್ಖಂಡ್ಗೆ ಹೊರಟಿದ್ದಾರೆ. ಈ 15 ಕಾರ್ವಿಕರನ್ನು ಅವರ ಕುಟುಂಬಸ್ಥರ ಸಮೇತ ಉತ್ತರಾಖಂಡದ ಡೆಹ್ರಾಡೂನ್ನಿಂದ ದೆಹಲಿಗೆ ಏರ್ ಲಿಫ್ಟ್ ಮಾಡಲಾಗಿದ್ದು, ಅಲ್ಲಿಂದ ಅವರನ್ನು ವಿಮಾನದಲ್ಲಿ ರಾಂಚಿಗೆ ಕಳುಹಿಸಿಕೊಡಲಾಗುತ್ತದೆ.