ಮೈಸೂರು: ರೈಲ್ವೇ ಹಳಿ ಮೇಲೆ ಮರದ ದಿಮ್ಮಿ ಹಾಗೂ ಕಬ್ಬಿಣದ ರಾಡ್ಗಳನ್ನು ಇಟ್ಟು ಜನರ ಜೀವದ ಜೊತೆ ಕಿಡಿಗೇಡಿಗಳು ಆಟವಾಡಿದ ಘಟನೆ ಚಾಮರಾಜನಗರ – ಮೈಸೂರು ಮಾರ್ಗದಲ್ಲಿ ನಡೆದಿದೆ. ಲೋಕೋಪೈಲಟ್ ಇದನ್ನು ಗಮನಿಸಿ ರೈಲನ್ನು (Train) ನಿಲ್ಲಿಸಿದ್ದು, ಭಾರೀ ಅಪಘಾತವೊಂದು ತಪ್ಪಿದೆ.
ಹಳಿ ಮೇಲೆ ಮರದ ದಿಮ್ಮಿ ಹಾಗೂ ಕಬ್ಬಿಣದ ರಾಡ್ ಇಡುವ ಮುನ್ನ ಕಿರಾತಕರು ಅದನ್ನು ವೀಡಿಯೋ ಕೂಡ ಮಾಡಿಕೊಂಡಿದ್ದಾರೆ. ಬಳಿಕ ಬೇರೊಂದು ರೈಲ್ವೇ ಹಳಿ ಮೇಲೆ ಮೊಬೈಲ್ ಇರಿಸಿ ರೈಲು ಹೋಗುವುದನ್ನು ವೀಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಕಿಡಿಗೇಡಿಗಳು ರೈಲು ಅಪಘಾತ ಮಾಡಲು ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: 10 ಕೋಟಿ ಆಸ್ತಿ ಆಸೆಗೆ ಪತ್ನಿಯನ್ನೇ ಕೊಂದು ಸಹಜ ಸಾವೆಂದು ನಾಟಕವಾಡಿ ಸಿಕ್ಕಿಬಿದ್ದ ಪತಿ
ಚಾಮರಾಜನಗರದಿಂದ (Chamarajanagar) ಮೈಸೂರಿಗೆ (Mysuru) ಬರುತ್ತಿದ್ದ ರೈಲಿನಲ್ಲಿ ಸುಮಾರು 400ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಹಳಿ ಮೇಲೆ ಮರದ ದಿಮ್ಮಿ ಹಾಗೂ ಕಬ್ಬಿಣದ ಸಲಾಕೆ ಇಟ್ಟಿರುವುದನ್ನ ಲೋಕೋಪೈಲಟ್ ಗಮನಿಸಿ ರೈಲನ್ನು ನಿಲ್ಲಿಸಿದ್ದಾನೆ.
ಈ ಸಂಬಂಧ ಮೂವರನ್ನು ರೈಲ್ವೇ ಪೊಲೀಸರು (Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಶಕ್ಕೆ ಪಡೆದ ಯುವಕರನ್ನು ಒಡಿಶಾ ಮೂಲದ ಸೋಮಯ್ ಮರಾಂಡಿ, ಭಜನು ಮುರ್ಮು ಹಾಗೂ ದಸಮತ್ ಮರಾಂಡಿ ಎಂದು ಗುರುತಿಸಲಾಗಿದೆ. ಯುವಕರು ವಿಚಾರಣೆ ವೇಳೆ ತಮಾಷೆಗಾಗಿ ಈ ರೀತಿ ಮಾಡಿದ್ದೇವೆ ಎಂದಿದ್ದಾರೆ. ಅಲ್ಲದೇ ಹಲವು ಗಂಟೆಗಳ ಕಾಲ ಆರೋಪಿಗಳು ಆ ಜಾಗದಲ್ಲಿ ಮದ್ಯಪಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕಾವೇರಿ ತವರು ಕೊಡಗಿನಲ್ಲೇ ಕುಸಿಯುತ್ತಿದೆ ಅಂತರ್ಜಲ ಮಟ್ಟ