ವೃದ್ಧ ತಾಯಿ ಮೇಲೆ ಮನಬಂದಂತೆ ಥಳಿಸಿದ ವಕೀಲ; ಸೊಸೆ, ಮೊಮ್ಮಗನೂ ಕೃತ್ಯಕ್ಕೆ ಸಾಥ್- ಪಾಪಿ ಮಗ ಅಂದರ್

Public TV
2 Min Read
Crime

ಚಂಡೀಗಢ: ಪಂಜಾಬ್‌ನ (Punjab) ಹೃದಯಭಾಗದಲ್ಲಿರುವ ರೋಪಾರ್‌ನ ಗ್ಯಾನಿ ಜೈಲ್ ಸಿಂಗ್ ನಗರ ಎಂಬ ಶಾಂತ ಪಟ್ಟಣದಲ್ಲಿ ಒಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ನಗರದ ಖ್ಯಾತ ವಕೀಲನೊಬ್ಬ (Lawyer) ತನ್ನ ವೃದ್ಧ ತಾಯಿಗೆ (Mother) ಮನಬಂದಂತೆ ಥಳಿಸಿ ಅಮಾನವೀಯವಾಗಿ ನಡೆದುಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆರೆಹೊರೆಯವರು ಘಟನೆಯನ್ನು ತಿಳಿದು ಬೆಚ್ಚಿಬಿದ್ದಿದ್ದಾರೆ.

ವೃದ್ಧ ಮಹಿಳೆ ಆಶಾರಾಣಿ (73) ತನ್ನ ಮಗ, ಸೊಸೆ ಹಾಗೂ ಮೊಮ್ಮಗನೊಂದಿಗೆ ಪಂಜಾಬ್‌ನ ರೂಪ್‌ನಗರದಲ್ಲಿ ವಾಸವಿದ್ದರು. ಚೆನ್ನಾಗಿ ಓದಿಸಿ, ಲಾಯರ್ ಆಗುವವರೆಗೆ ಪೋಷಿಸಿದ ತಾಯಿಗೇ ಮಗನಾದ ಅಂಕುರ್ ವರ್ಮಾ ನಿರ್ದಯವಾಗಿ ಪದೇ ಪದೇ ಥಳಿಸಿದ್ದಾನೆ. ಈ ಕೃತ್ಯಕ್ಕೆ ವೃದ್ಧೆಯ ಸೊಸೆ ಹಾಗೂ ಮೊಮ್ಮಗನೂ ಸಾಥ್ ನೀಡಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ.

CRIME

ಆಶಾರಾಣಿ ಅವರ ಪತಿ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದರು. ಇದಾದ ಬಳಿಕ ವೃದ್ಧೆಗೆ ಮಗ ಹಾಗೂ ಸೊಸೆ ದೈಹಿಕ ಹಿಂಸೆ ನೀಡುತ್ತಿದ್ದರು. ಅವರ ಈ ಎಲ್ಲಾ ಕೃತ್ಯಗಳು ತಾಯಿಯ ಕೊಠಡಿಯಲ್ಲಿ ಮಗನೇ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನು ಕಂಡುಹಿಡಿಯುವಲ್ಲಿ ವೃದ್ಧೆಯ ಮಗಳಾದ ದೀಪಶಿಖಾ ಯಶಸ್ವಿಯಾಗಿದ್ದಾರೆ. ತನ್ನ ಸಹೋದರನ ಕೃತ್ಯ ಕಣ್ಣಾರೆ ಕಂಡು ದೀಪಶಿಖಾ ದಿಗ್ಬ್ರಮೆಗೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಬಿಎಂಟಿಸಿಗೆ ಇಬ್ಬರು ಬಲಿ

ವೀಡಿಯೋದಲ್ಲೇನಿದೆ?
ಸಂತ್ರಸ್ತೆಯ ಮೊಮ್ಮಗ ಮೊದಲು ಆಶಾರಾಣಿ ಅವರ ಹಾಸಿಗೆ ಮೇಲೆ ನೀರು ಸುರಿಯುವುದು ಕಂಡುಬಂದಿದೆ. ನಂತರ ವೃದ್ಧೆ ಹಾಸಿಗೆ ಒದ್ದೆ ಮಾಡಿದ್ದಾಗಿ ಹೆತ್ತವರಿಗೆ ದೂರು ನೀಡಿದ್ದಾನೆ. ನಂತರ ಆರೋಪಿ ಅಂಕುರ್ ಹಾಗೂ ಆತನ ಪತ್ನಿ ಸುಧಾ ಹಾಸಿಗೆಯನ್ನು ಪರಿಶೀಲಿಸಿದ್ದಾರೆ. ವೃದ್ಧ ತಾಯಿಯೇ ಹಾಸಿಗೆ ಒದ್ದೆ ಮಾಡಿದ್ದಾಗಿ ಭಾವಿಸಿ ಅಂಕುರ್ ಆಕೆಗೆ ಹಾಸಿಗೆ ಮೇಲೆ ಮಲಗಿದ್ದಾಗಲೇ ಪದೇ ಪದೇ ಹಲ್ಲೆ ಮಾಡಿದ್ದಾನೆ. ಆಕೆಯ ಬೆನ್ನಿಗೆ ಪದೇ ಪದೇ ಗುದ್ದಿದ್ದು ಮಾತ್ರವಲ್ಲದೇ ನಿಮಿಷಗಳವರೆಗೆ ನಿರಂತರವಾಗಿ ಕಪಾಳಮೋಕ್ಷವೂ ಮಾಡಿದ್ದಾನೆ. ಆಕೆಯ ಕೂದಲನ್ನು ನಿರ್ದಯವಾಗಿ ಎಳೆದಾಡುವ ಭಯಾನಕ ದೃಶ್ಯಗಳು ವೀಡಿಯೋದಲ್ಲಿ ಕಾಣಿಸಿಕೊಂಡಿದೆ.

ಸಹೋದರ ತಾಯಿ ಮೇಲೆ ಎಸಗಿದ್ದ ದೈಹಿಕ ಕಿರುಕುಳವನ್ನು ಅರಿತ ದೀಪಶಿಖಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಪೊಲೀಸ್ ತಂಡ ಮತ್ತು ಎನ್‌ಜಿಒ ಅಧಿಕಾರಿಗಳು ಶನಿವಾರ ಘಟನಾ ಸ್ಥಳ ತಲುಪಿ ವೃದ್ಧೆಯನ್ನು ರಕ್ಷಿಸಿದ್ದಾರೆ. ಈ ವೇಳೆ ಆರೋಪಿಗಳು ತಾಯಿಯ ಮಾನಸಿಕ ಸ್ಥಿತಿ ಸರಿಯಿಲ್ಲ, ನಾವು ಆಕೆಯ ಆರೈಕೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಇದೀಗ ಸಿಸಿಟಿವಿ ಸಾಕ್ಷಿಯ ಆಧಾರದ ಮೇಲೆ ಪೊಲೀಸರು ವಕೀಲ ಅಂಕುರ್ ವರ್ಮಾನನ್ನು ಬಂಧಿಸಿದ್ದಾರೆ. ಆಸ್ತಿಯನ್ನು ಸುಲಿಗೆ ಮಾಡಲು ಸ್ವಯಂಪ್ರೇರಿತರಾಗಿ ಗಾಯಗೊಳಿಸುವುದು, ಅಕ್ರಮ ಬಂಧನ ಮತ್ತು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆಯ ಸೆಕ್ಷನ್ 24ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಅಪರಿಚಿತರಿಂದ ಗುಂಡಿನ ದಾಳಿ – ಅಂಗಡಿ ಮಾಲೀಕ ಸ್ಥಳದಲ್ಲೇ ಸಾವು

Web Stories 

Share This Article