ಬೆಂಗಳೂರು: ತಿರುಪತಿ (Tirupati) ತಿಮ್ಮಪ್ಪನ ಲಡ್ಡುಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ ವಿಚಾರದಲ್ಲಿ ರಾಜಕೀಯ ಮುಂದುವರಿದಿದೆ.
ದೇವಸ್ಥಾನ ಮತ್ತು ಹಿಂದೂಗಳ ಶ್ರದ್ಧೆ-ಭಕ್ತಿಯ ವಿಚಾರದಲ್ಲಿ ಅಸಡ್ಡೆ ತೋರುವ ಕಾಂಗ್ರೆಸ್ ನೀತಿಯಿಂದಾಗಿ ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಂಡಿದೆ. ಹಿಂದೂಗಳೆಡೆಗಿನ ಸಿದ್ದರಾಮಯ್ಯನವರ (Siddaramaiah) ತಾತ್ಸಾರ ನೀತಿ ಋಜುವಾತಾಗಿದೆ ಎಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಟ್ವೀಟ್ ಮೂಲಕ ಆರೋಪ ಮಾಡಿದ್ರು. ಇದಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ತಿರುಪತಿಗೆ (Tirupati) ನಂದಿನಿ ತುಪ್ಪ ಪೂರೈಕೆ ನಿಂತಿರೋದು ಇಂದು-ನಿನ್ನೆಯ ವಿಚಾರವಲ್ಲ ಒಂದೂವರೆ ವರ್ಷದ ಹಿಂದೆಯೇ ಅಂದ್ರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿರುಪತಿಗೆ ತುಪ್ಪ ಪೂರೈಕೆ ಬಂದ್ ಆಗಿದೆ. ಮಾನ್ಯ ಕಟೀಲ್ ಅವರೇ, ಈಗ ಹೇಳಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಂದೂ ಧಾರ್ಮಿಕ ಶ್ರದ್ಧಾಭಕ್ತಿಯ ವಿರೋಧಿಯೋ? ಅಥವಾ ಬೊಮ್ಮಾಯಿ ಮಾತ್ರ ಹಿಂದೂ ವಿರೋಧಿಯೋ ಎಂದು ಪ್ರಶ್ನಿಸಿದ್ದಾರೆ. ನಮಗೆ ಜನರ ಧಾರ್ಮಿಕ ನಂಬಿಕೆಯ ಜೊತೆಗೆ ಹೈನುಗಾರರ ಬದುಕು ಕೂಡ ಮುಖ್ಯ. ನಾಡಿನ ರೈತರ ಹಿತದೃಷ್ಟಿಯಿಂದ ನಾವು ಕೇಳುವ ದರ ನೀಡಲು ಟಿಟಿಡಿ ಒಪ್ಪುವುದಾದ್ರೇ ತುಪ್ಪ ಪೂರೈಸಲು ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸಿಎಂ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ (Congress) ಟ್ವೀಟ್ ಮಾಡಿ, ನಮ್ಮ ಹೆಮ್ಮೆಯ ನಂದಿನಿಗೆ ಮಾರ್ಕೆಟ್ನಲ್ಲಿ ತನ್ನದೇ ಆದ ಸ್ಥಾನವಿದೆ. ಉತ್ತಮ ಹೆಸರಿದೆ. ಗುಣಮಟ್ಟ ಮತ್ತು ಬೆಲೆಯಲ್ಲಿ ರಾಜಿಯಾಗಲ್ಲ ಟೆಂಡರ್ ಪಡೆಯಬೇಕು ಎಂಬ ಒಂದೇ ಉದ್ದೇಶಕ್ಕೆ ಬೆಲೆಯಲ್ಲಿ ರಾಜೀ ಮಾಡ್ಕೊಂಡು ನಷ್ಟ ಮಾಡ್ಕೊಳ್ಳುವ ಅಗತ್ಯವಿಲ್ಲ. ನಂದಿನಿಗೆ ಹೆಚ್ಚು ಬೇಡಿಕೆ ಇದೆ. ಟೆಂಡರ್ ಕೈತಪ್ಪಿದ್ರೂ ಕೆಎಂಎಫ್ಗೆ ನಷ್ಟವೇನಿಲ್ಲ ಎಂದು ಹೇಳಿದೆ.
ಅತ್ತ ಟಿಟಿಡಿ ಇಓ ಧರ್ಮಾರೆಡ್ಡಿ ಪ್ರತಿಕ್ರಿಯಿಸಿ, ನಂದಿನಿ ತುಪ್ಪ ಪೂರೈಕೆಗೆ ನಾವೇನು ಅಡ್ಡಿ ಮಾಡಿಲ್ಲ. ಕೆಎಂಎಫ್ (KMF) ಅಧ್ಯಕ್ಷರ ಮಾತು ಸತ್ಯಕ್ಕೆ ದೂರವಾದುದು. ಮಾರ್ಚ್ನಲ್ಲಿ ಕರೆದ ಟೆಂಡರ್ನಲ್ಲಿ ಕೆಎಂಎಫ್ ಭಾಗವಹಿಸಿರಲಿಲ್ಲ. ನಿಯಮ ಮೀರಿ ನಾವು ಕೆಎಂಎಫ್ಗೆ ಟೆಂಡರ್ ನೀಡಲು ಆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಕೆಎಂಎಫ್ ರಾಯಭಾರಿಯಾಗಿ ನಟ ಶಿವರಾಜ್ಕುಮಾರ್ ನೇಮಕಗೊಂಡಿದ್ದಾರೆ. ಈ ಮೂಲಕ ಅವರ ಅಪ್ಪ ಮತ್ತು ಅಪ್ಪು ಪರಂಪರೆಯನ್ನು ಮುಂದುವರಿಸಿದ್ದಾರೆ.
Web Stories