– ಮೈಸೂರಲ್ಲಿ ತಂಗಿಯ ಪ್ರೀತಿ ಎಡವಟ್ಟಿಗೆ ಬಲಿಯಾದ ಅಣ್ಣ!
ಮೈಸೂರು: ನಗರದಲ್ಲಿ ಶುಕ್ರವಾರ ನಡೆದಿದ್ದ ಯುವಕನ ಬರ್ಬರ ಹತ್ಯೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಂಗಿಯ ಪ್ರೀತಿ ಎಡವಟ್ಟಿಗೆ ಅಣ್ಣ ಬಲಿಯಾಗಿದ್ದಾನೆ. ಪ್ರಿಯಕರನೇ ಯುವತಿಯ ಅಣ್ಣನನ್ನು ಹತ್ಯೆ ಮಾಡಿದ್ದಾನೆ.
ಬೆಳವಾಡಿ ಗ್ರಾಮದ ಹೊರವಲಯದಲ್ಲಿ ಹೇಮಂತ್ ಎಂಬಾತ ಕೊಲೆಯಾಗಿದ್ದಾನೆ. ಹೇಮಂತ್ ಸಹೋದರಿಯ ಪ್ರಿಯಕರ ಸಾಗರ್ ಮತ್ತು ಆತನ ಗ್ಯಾಂಗ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಇದನ್ನೂ ಓದಿ: `ಗ್ಯಾರಂಟಿ’ಗೆ ಅರ್ಜಿ ಸಲ್ಲಿಸುವ ಮುನ್ನ ಹುಷಾರ್ – ಸೈಬರ್ ಕಳ್ಳರಿದ್ದಾರೆ ಎಚ್ಚರ!
ಹೇಮಂತ್ ಸಹೋದರಿ ಮತ್ತು ಸಾಗರ್ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವತಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಳು. ಸಾಗರ್ ಪೇಂಟರ್ ಆಗಿದ್ದ. ಚೆಲುವಿನ ಚಿತ್ತಾರ ಸಿನಿಮಾ ಮಾದರಿಯಂತೆ ಇವರಿಬ್ಬರು ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಹುಡುಗಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.
ಪ್ರೀತಿಗೆ ವಿರೋಧಿಸಿದ್ದಕ್ಕೆ 15 ದಿನಗಳ ಹಿಂದೆ ಯುವತಿ ಮನೆಬಿಟ್ಟು ಹೋಗಿ ಪ್ರಿಯಕರನೊಂದಿಗೆ ವಿವಾಹವಾಗಿದ್ದಳು. ಯುವತಿ ಅಣ್ಣ ಆಕೆಯ ಕುತ್ತಿಗೆಯಲ್ಲಿದ್ದ ತಾಳಿ ಕಿತ್ತೆಸೆದು ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದ. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆಗ ಪೊಲೀಸ್ ಠಾಣೆಯಲ್ಲಿ ಯುವತಿ ಮನಸ್ಸು ಬದಲಾಯಿಸಿ ಸಾಗರ್ ಪ್ರೀತಿ ನಿರಾಕರಿಸಿದ್ದಳು. ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಪೊಲೀಸರಿಂದ ಹಲ್ಲೆ – ಮನನೊಂದ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ
ಇದರಿಂದ ಕೋಪಗೊಂಡು ಸಾಗರ್ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.