ರಾಯಚೂರು: ಮೇಲಿನಿಂದ ಕೆಳಗೆ ಭ್ರಷ್ಟಾಚಾರ ಇರೋ ನೀವು, ಭ್ರಷ್ಟಾಚಾರದ ಬಗ್ಗೆ ಮಾತನಾಡೋದು ನಿಮಗೆ ಶೋಭೆಯಲ್ಲ. ಸಿದ್ದರಾಮಯ್ಯ ನೀವು ಮೊದಲು ಕ್ಷಮೆ ಕೇಳಲೇ ಬೇಕು ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಆಗ್ರಹಿಸಿದ್ದಾರೆ.
ಜಿಲ್ಲೆಯ ಲಿಂಗಸುಗೂರಿನಲ್ಲಿ ಬಿಜೆಪಿ ಅಭ್ಯರ್ಥಿ (BJP Candidate) ಮಾನಪ್ಪ ವಜ್ಜಲ್ ಪರ ರೋಡ್ ಶೋ ಮೂಲಕ ಮತಬೇಟೆ ನಡೆಸಿದ ಜೆಪಿ ನಡ್ಡಾ ಕಾರ್ಯಕರ್ತರನ್ನ ಉದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ರಾಜ್ಯ ಕಾಂಗ್ರೆಸ್ (Congress) ನಾಯಕರನ್ನ ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಪ್ರಧಾನಿಯಾಗಿರುವವರು ಪಂಚಾಯ್ತಿ ಚುನಾವಣೆಗಳಲ್ಲಿ ತಿರುಗುವ ಹಾಗೆ ತಿರುಗ್ತಿದ್ದಾರೆ: ರಮೇಶ್ ಕುಮಾರ್
ಸಿದ್ದರಾಮಯ್ಯ (Siddaramaiah) ಪಿಎಫ್ ಐ (PFI) ನ 175 ಕೇಸ್ ವಾಪಸ್ ಪಡೆದಿದ್ರಿ. ನೂರಾರು ಜನರನ್ನ ಜೈಲಿನಿಂದ ಬಿಟ್ಟಿದ್ದೀರಿ. ನೀವೇನು ಭ್ರಷ್ಟಾಚಾರದ ಬಗ್ಗೆ ಮಾತನಾಡ್ತೀರಿ. ಶಿಕ್ಷಕರ ಹಗರಣ, ಪೊಲೀಸ್ ನೇಮಕಾತಿ ಹಗರಣ, ಬಿಬಿಎಂಪಿ (BBMP) ಬೋರ್ ವೆಲ್, ಆರ್ ಓ ಮಷಿನ್ ಹಗರಣ, ಸ್ಲಂ ಅಭಿವೃದ್ಧಿ ಪ್ರಾಧಿಕಾರದ ಹಗರಣ ಒಂದೆರೆಡಲ್ಲ. ಡಿ.ಕೆ ಶಿವಕುಮಾರ್ ನೀವು ಹೇಳಿ, ನಿಮ್ಮ ಮೇಲೆ ಸಿಬಿಐ ಕೇಸ್ ಇದೆಯೋ ಇಲ್ವಾ..? ನೀವು ಬೇಲ್ ಮೇಲೆ ಹೊರಗಿದ್ದೀರೊ ಇಲ್ವೋ..? ಕಾಂಗ್ರೆಸ್ ಪಾರ್ಟಿ ಕಥೆಯೇ ಅದು, ಜೇಲ್ ನಲ್ಲಿ ಇಲ್ಲ, ಬೇಲ್ ಮೇಲೆ ಇರೋದು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ ಬೇಲೆ ಮೇಲೆ ಇದ್ದಾರೆ. ಸಿದ್ದರಾಮಯ್ಯ ಸಮಯದಲ್ಲಿ ಅರ್ಕಾವತಿ ಸಂಬಂಧ 8 ಸಾವಿರ ರೈತರಿಗೆ ಅನ್ಯಾಯ ಮಾಡಲಾಗಿದೆ. ಹೀಗಾಗಿ ಬಿಜೆಪಿಯನ್ನು ಗೆಲ್ಲಿಸಿ ಅಂತ ಜೆಪಿ ನಡ್ಡಾ ಮತಯಾಚನೆ ಮಾಡಿದರು.
ಸಾಮಾಜಿಕ ನ್ಯಾಯವನ್ನು ನಿಲ್ಲಿಸುವ ಕೆಲಸ ಕಾಂಗ್ರೆಸ್ ಮಾಡಿತ್ತು. ಆದರೆ ಬೊಮ್ಮಾಯಿ ಮೀಸಲಾತಿ ಹೆಚ್ಚಿಸಿದ್ದಾರೆ. ನಾವು ಧರ್ಮದ ಆಧಾರದ ಮೀಸಲಾತಿ ಮುಕ್ತಾಯಗೊಳಿಸಿದ್ದೇವೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮತ್ತೆ ಧರ್ಮಾಧಾರಿತ ಮೀಸಲಾತಿ ಕೊಡ್ತೀವಿ ಎನ್ನುತ್ತಿದ್ದಾರೆ. ಕಾಂಗ್ರೆಸ್ನವರು ಬ್ಯಾಕ್ ಗೇರ್ ಹಾಕುವವರು. ಇವರನ್ನ ಮನೆಯಲ್ಲೇ ಕೂರಿಸಬೇಕು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರಾಜ್ಯಕ್ಕೆ ಅವಶ್ಯಕತೆ ಇಲ್ಲ ಅಂತ ಜೆಪಿ ನಡ್ಡಾ ವಾಗ್ದಾಳಿ ನಡೆಸಿದರು.