– ಮೋದಿ ರೋಡ್ ಶೋ ವೇಳೆ ಅಂಬುಲೆನ್ಸ್ ತರಲು ಕಾಂಗ್ರೆಸ್ ಸಂಚು
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ವಿದ್ಯಾರ್ಥಿಗಳ (Students) ಮೇಲೆ ವಿಶೇಷ ಕಾಳಜಿ ಇದೆ. ಅವರ ಅಪೇಕ್ಷೆಯಂತೆಯೇ ಬೆಂಗಳೂರಿನಲ್ಲಿ (Bengaluru) ನಡೆಯಬೇಕಿದ್ದ ಶನಿವಾರ ಹಾಗೂ ಭಾನುವಾರದ ರೋಡ್ ಶೋಗಳಲ್ಲಿ (Road Show) ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಭಾ, ಮೋದಿಯವರ ರೋಡ್ ಶೋ ಮೇ 6 ಹಾಗೂ 7 ಕ್ಕೆ ಇದೆ. ಅದಕ್ಕಾಗಿ ಎಲ್ಲ ತಯಾರಿಯ ಬಗ್ಗೆ ಕಾರ್ಯಕರ್ತರಿಗೆ ಮಾಹಿತಿ ಕೊಟ್ಟಿದ್ದೆವು. ಆದರೆ ಭಾನುವಾರ ನೀಟ್ ಪರೀಕ್ಷೆ ಇದ್ದು, ರೋಡ್ ಶೋದಿಂದ ಅಭ್ಯರ್ಥಿಗಳಿಗೆ ಸಮಸ್ಯೆ ಆಗುವ ಬಗ್ಗೆ ಪ್ರಧಾನಿಯವರ ಗಮನಕ್ಕೆ ತಂದೆವು. ಪ್ರಧಾನಿಯವರು ಮಕ್ಕಳ ಪರೀಕ್ಷೆ ಬಗ್ಗೆ ಕಾಳಜಿಯುಳ್ಳವರು. ಪರೀಕ್ಷೆ ಬಗ್ಗೆ ಚರ್ಚೆ ನಡೆಸಿ, ರೋಡ್ ಶೋದಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆ ಆಗಬಾರದು ಎಂದು ಹೇಳಿ ಬದಲಾವಣೆ ಮಾಡಿಸಿದರು ಎಂದು ತಿಳಿಸಿದರು.
ನೀಟ್ ಪರೀಕ್ಷೆ ಮಕ್ಕಳ ಭವಿಷ್ಯ ಬರೆಯುತ್ತದೆ. ಮೋದಿಯವರಿಗೆ ವಿದ್ಯಾರ್ಥಿಗಳ ಮೇಲೆ ವಿಶೇಷ ಕಾಳಜಿ ಇದೆ. ಪ್ರಧಾನಿ ಅಪೇಕ್ಷೆಯಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮಗಳು ಅದಲು ಬದಲಾಯಿಸಿದ್ದೇವೆ. 26.5 ಕಿ.ಮೀ.ನ ದೊಡ್ಡ ರೋಡ್ ಶೋ ಶನಿವಾರ ಇರಲಿದ್ದು, ಭಾನುವಾರ ಚಿಕ್ಕ ರೋಡ್ ಶೋ ಇರುತ್ತದೆ. ಇದರಿಂದ ಯಾವುದೇ ಮಕ್ಕಳಿಗೆ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ. ಭಾನುವಾರದ ರೋಡ್ ಶೋ ನಡೆಯುವ ದಾರಿಯಲ್ಲಿ ಪರೀಕ್ಷಾ ಕೇಂದ್ರಗಳು ಕಡಿಮೆ ಇದೆ. ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿದರೆ ಪೊಲೀಸರು ಪರೀಕ್ಷಾ ಕೇಂದ್ರಕ್ಕೆ ಹೋಗಲು ಅವಕಾಶ ಕೊಡುತ್ತಾರೆ. ಪೊಲೀಸರಿಗೆ ಸಹಕರಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನೀಟ್ ಅಭ್ಯರ್ಥಿಗಳಿಗೆ ಸಂಚಾರದ ಆತಂಕ – ಬೆಂಗಳೂರಲ್ಲಿ ಮೋದಿ ರೋಡ್ ಶೋನಲ್ಲಿ ಮತ್ತೆ ಬದಲಾವಣೆ
ಕಾಂಗ್ರೆಸ್ ಷಡ್ಯಂತ್ರ:
ಮೋದಿ ರೋಡ್ ಶೋಗೆ ಕಾಂಗ್ರೆಸ್ನವರು ಷಡ್ಯಂತ್ರ ಮಾಡಿದ್ದಾರೆ. ರೋಡ್ ಶೋ ವೇಳೆ ಅಂಬುಲೆನ್ಸ್ಗಳನ್ನು ತರಲು ಕಾಂಗ್ರೆಸ್ ಸಂಚು ಮಾಡಿದೆ. ನಾವು ಯಾವುದೇ ಅಂಬುಲೆನ್ಸ್ಗೂ ಭಂಗ ಮಾಡದೇ ಹೋಗಲು ಅವಕಾಶ ನೀಡುತ್ತೇವೆ. ಆದರೆ ಅಂಬುಲೆನ್ಸ್ಗಳಲ್ಲಿ ರೋಗಿ ಇದ್ದಾರೋ, ಇಲ್ಲವೋ ಎಂಬುದನ್ನು ತಪಾಸಣೆ ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಕಾಂಗ್ರೆಸ್ ಮೋದಿ ರೋಡ್ ಶೋ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ, ಮೋದಿ ರ್ಯಾಲಿ ರದ್ದು ಮಾಡಿ: ಹೆಚ್ಡಿಕೆ ವಾಗ್ದಾಳಿ