ಕಾಂತಾರ (Kantara) ಚಿತ್ರದ ಗೆಲುವಿನ ನಂತರ ರಿಷಬ್ ಶೆಟ್ಟಿ (Rishabh Shetty) ಮೇಲೆ ರಾಜಕಾರಣಿಗಳ (Politics) ಕಣ್ಣು ಬಿದ್ದಿದ್ದು ನಿಜ. ಅಲ್ಲದೇ, ಬಿಜೆಪಿ ಇವರನ್ನು ಸಂಪರ್ಕಿಸಿ, ಈ ಬಾರಿಯ ಚುನಾವಣೆಗೆ ನಿಲ್ಲುವಂತೆ ಆಹ್ವಾನ ನೀಡಿತ್ತು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ರಿಷಬ್ ರಾಜಕಾರಣದ ಪಡಸಾಲೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿಯಿತ್ತು. ಅದಕ್ಕೆ ಮತ್ತೆ ಸ್ಪಷ್ಟನೆ ನೀಡಿದ್ದಾರೆ ರಿಷಬ್.
ಈ ಹಿಂದೆಯೇ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ್ದ ರಿಷಬ್, ‘ಈಗಾಗಲೇ ನನ್ನನ್ನು ಒಂದು ಪಕ್ಷಕ್ಕೆ ಸೇರಿಸಿಬಿಟ್ಟಿದ್ದಾರೆ. ನಾನಾ ಕ್ಷೇತ್ರಗಳಿಗೂ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಇಂತಹ ಗಾಸಿಪ್ ಹಬ್ಬಿಸುವವರಿಗೆ ಏನು ಹೇಳಲಿ? ನನಗೆ ನನ್ನದೇ ಆದ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿಯಿದೆ. ಸಿನಿಮಾ ಮಾಡಬೇಕು. ಯಾವುದೇ ಕಾರಣಕ್ಕೂ ರಾಜಕೀಯ ಕ್ಷೇತ್ರಕ್ಕೆ ಬರಲ್ಲ’ ಎಂದಿದ್ದರು.
ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಮತ್ತೆ ರಿಷಬ್ ಇಂಥದ್ದೇ ಮಾತುಗಳನ್ನು ಆಡಿದ್ದಾರೆ. ಹಿರಿಯ ಸಿನಿಮಾ ಪತ್ರಕರ್ತೆ ಸರಸ್ವತಿ ಅವರು ರಿಷಬ್ ಫೋಟೋವೊಂದನ್ನು ಶೇರ್ ಮಾಡಿ, ರಿಷಬ್ ರಾಜಕಾರಣಕ್ಕೆ ಬರಲಿದ್ದಾರೆ ಎಂದು ಏಪ್ರಿಲ್ ಫೂಲ್ ದಿನ ಪೋಸ್ಟ್ ಮಾಡಿದ್ದರು. ಅದಕ್ಕೆ ಉತ್ತರಿಸಿರುವ ಅವರು, ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ.
ರಿಷಬ್ ಪ್ರತಿಕ್ರಿಯೆಗೆ ಹಲವರು ಕಾಮೆಂಟ್ ಮಾಡಿದ್ದು, ನಿಮಗೆ ರಾಜಕೀಯ ಒಪ್ಪುತ್ತದೆ ಬನ್ನಿ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಸಿನಿಮಾ ರಂಗವೇ ಬೆಸ್ಟು ಅಲ್ಲಿಯೇ ನೀವು ಇರಿ ಎಂದು ಹಲವರು ಸಲಹೆ ನೀಡಿದ್ದಾರೆ. ಸಾವಿರಾರು ಜನರು ಈ ಮಾತಿಗೆ ಪರ ವಿರೋಧದ ಕಾಮೆಂಟ್ ಹಾಕುತ್ತಲೇ ಇದ್ದಾರೆ.