ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ – ಬಿಜೆಪಿ ಹೈಕಮಾಂಡ್‌ಗೆ ಬಿಎಸ್‌ವೈ ಚೆಕ್‌ಮೇಟ್!

Public TV
2 Min Read
BS Yediyurappa Amit Shah BY Vijayendra

ಮೈಸೂರು: ಸಿದ್ದರಾಮಯ್ಯ (Siddaramaiah) ವಿರುದ್ಧ ವಿಜಯೇಂದ್ರ (Vijayendra) ಸ್ಪರ್ಧಿಸಲ್ಲ ಎಂಬ ಬಿ.ಎಸ್.ಯಡಿಯೂರಪ್ಪ (Yediyurappa) ಅವರ ಮಾತಿನ ಒಳಾರ್ಥಗಳು ಬೇರೆ ಇವೆ. ರಾಜ್ಯ ರಾಜಕೀಯದಲ್ಲಿ ಅದರಲ್ಲೂ ರಾಜ್ಯ ಬಿಜೆಪಿ ಒಳಗೆ ಈ ಬಗ್ಗೆ ತರಾವರಿ ವಿಶ್ಲೇಷಣೆ ನಡೆದಿದೆ.

ಬಿ.ವೈ.ವಿಜಯೇಂದ್ರ ವರುಣಾ (Varuna) ಕ್ಷೇತ್ರದ ಸ್ಪರ್ಧೆಯ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ ಮಾತಿನ ಒಳಗೆ ಹತ್ತಾರು ಗೂಢಾರ್ಥಗಳಿವೆ.‌‌‌ ಮೊನ್ನೆ ತಾನೇ ವಿಜಯೇಂದ್ರ ವರುಣಾದಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ ಎಂದಿದ್ದ ಬಿಎಸ್‌ವೈ ನಿನ್ನೆ ದಿಢೀರನೆ ಯೂ ಟರ್ನ್ ತೆಗೆದುಕೊಂಡಿದ್ದಕ್ಕೆ ಅನೇಕ ಕಾರಣಗಳಿವೆ. ಈ ರೀತಿ ಯೂ ಟರ್ನ್ ತೆಗೆದುಕೊಳ್ಳುವ ಮೂಲಕ ಬಿಎಸ್‌ವೈ ಮಗನ ರಾಜಕೀಯ ಭವಿಷ್ಯವನ್ನು ಸೇಫ್‌ ಮಾಡಿದ್ದಾರೆ. ಜೊತೆಗೆ ಬಿಜೆಪಿ ಹೈಕಮಾಂಡ್‌ಗೂ (BJP High Command) ಚೆಕ್‌ಮೇಟ್ ಇಟ್ಟಿದ್ದಾರೆ. ಇದನ್ನೂ ಓದಿ: ವರುಣಾದಿಂದ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್‌ ಒಪ್ಪಿತ್ತು; ಆದ್ರೆ ನಾನೇ ಬೇಡ ಎಂದಿದ್ದೇನೆ – ಬಿಎಸ್‌ವೈ

SIDDARAMAIAH BY VIJAYENDRA

ಬಿ.ವೈ.ವಿಜಯೇಂದ್ರಗೆ ವರುಣಾದಲ್ಲಿ ಸ್ಪರ್ಧಿಸುವ ಆಸೆ ಇರೋದು ನಿಶ್ಚಿತ. ಹಾಗಂತ ಶಿಕಾರಿಪುರವನ್ನು ಬಿಡುವಂತಿಲ್ಲ. ಹೀಗಾಗಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಬೇಕು. ಆದರೆ ಎರಡು ಟಿಕೆಟ್ ಪ್ರಸ್ತಾಪವನ್ನು ಬಿಎಸ್‌ವೈ ಆಗಲಿ ಅಥವಾ ವಿಜಯೇಂದ್ರ ಅವರೇ ಆಗಲಿ ಹೈಕಮಾಂಡ್ ಮುಂದಿಟ್ಟರೆ ಅವರು ಸಾಧ್ಯವೇ ಇಲ್ಲ ಅನ್ನೋದು ನಿಶ್ಚಿತ. ಆಗ ಹೈಕಮಾಂಡ್ ವರುಣಾಗೆ ನಿಲ್ಲಿ, ಶಿಕಾರಿಪುರದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡುತ್ತೇವೆ ಎನ್ನುವ ಸಾಧ್ಯತೆ ಹೆಚ್ಚಿದೆ. ಇದು ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ಹಿನ್ನೆಲೆಯಲ್ಲಿ ಬಹು ಅಪಾಯಕಾರಿ. ಒಂದು ಬಾರಿ ಹುಟ್ಟೂರಿನ ಕ್ಷೇತ್ರ ಕೈತಪ್ಪಿ ಬಿಟ್ಟರೆ ಮುಗಿದೆ ಹೋಯ್ತು ಅನ್ನೋದು ಬಿಎಸ್‌ವೈರಂಥ ಬಹು ಅನುಭವಿ ರಾಜಕಾರಣಿಗೆ ಸ್ಪಷ್ಟವಾಗಿ ಗೊತ್ತಿದೆ.

ಈ ಅಪಾಯದ ಸಾಧ್ಯತೆ ಊಹಿಸಿದ ಬಿಎಸ್‌ವೈ ಸ್ಪಷ್ಟವಾಗಿ ವಿಜಯೇಂದ್ರ ವರುಣಾದಲ್ಲಿ ನಿಲ್ಲಲ್ಲ. ಶಿಕಾರಿಪುರದಲ್ಲೇ ಸ್ಪರ್ಧೆ ಮಾಡಬೇಕು. ಅದೇ ನನ್ನ ಆಸೆ. ವರುಣಾದಲ್ಲಿ ಸ್ಪರ್ಧಿಸುವ ಪ್ರಶ್ನೆಯೆ ಇಲ್ಲ ಅಂದು ಬಿಟ್ಟರು. ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಾವುಟ ಹಾರಿಸ್ತೇವೆ, ದಶಪಥ ಹೆದ್ದಾರಿ ದೊಡ್ಡ ಶಕ್ತಿ – ಪ್ರತಾಪ್ ಸಿಂಹ

BS Yediyurappa

ಈಗ ಸಿದ್ದರಾಮಯ್ಯರನ್ನು ವರುಣಾ ಕ್ಷೇತ್ರದಲ್ಲೇ ಕಟ್ಟಿ ಹಾಕಬೇಕಾದರೆ ಬಿಜೆಪಿಗೆ ಲಿಂಗಾಯತ ಬ್ರಹ್ಮಾಸ್ತ್ರ ಬೇಕೇ ಬೇಕು. ಆ ಬ್ರಹ್ಮಾಸ್ತ್ರ ಸದ್ಯಕ್ಕೆ ವಿಜಯೇಂದ್ರ ಮಾತ್ರ. ಆದರೆ ಬಿಎಸ್‌ವೈ ಶಿಕಾರಿಪುರದಿಂದ ಮಗ ಸ್ಪರ್ಧಿಸಲಿ ಅಂತಾ ಹೇಳಿರೋ ಕಾರಣ ಶಿಕಾರಿಪುರವನ್ನು ಬೇರೆ ಕಾರ್ಯಕರ್ತನಿಗೆ ನೀಡುವ ರಿಸ್ಕ್‌ನಂತೂ ಬಿಜೆಪಿ ಮಾಡಲ್ಲ. ಅಲ್ಲಿಗೆ ವರುಣಾಗೆ ಬ್ರಹ್ಮಾಸ್ತ್ರ ಬೇಕಾದರೆ ಅನಿವಾರ್ಯವಾಗಿ ವಿಜಯೇಂದ್ರಗೆ ಬಿಜೆಪಿ ಎರಡು ಟಿಕೆಟ್ ಕೊಡಲೇಬೇಕು. ಇಷ್ಟರ ಮಟ್ಟಿಗೆ ಬಿಜೆಪಿ ಹೈಕಮಾಂಡ್‌ಗೆ ಬಿಎಸ್‌ವೈ ಚೆಕ್‌ಮೇಟ್ ಬಿದ್ದಂತಾಗಿದೆ.

ಸಿದ್ದರಾಮಯ್ಯರನ್ನು ಕಟ್ಟಿ ಹಾಕಬೇಕಾದ ನಿರ್ಧಾರ ಕೈಗೊಳ್ಳುವ ಚೆಂಡು ಬಿಜೆಪಿ ಹೈಕಮಾಂಡ್ ಅಂಗಳದಲ್ಲಿದೆ. ಸಿದ್ದರಾಮಯ್ಯರ ವಿಚಾರದಲ್ಲಿ ಅಷ್ಟೊಂದು ಜಿದ್ದು ಮಾಡೋದು ಬೇಡ ಅಂತಾ ಹೈಕಮಾಂಡ್‌ಗೆ ಅನ್ನಿಸಿದರೆ ನೆಪ ಮಾತ್ರಕ್ಕೆ ಒಬ್ಬ ಅಭ್ಯರ್ಥಿಯನ್ನು ಹಾಕುತ್ತಾರೆ. ಇಲ್ಲವೆ ವಿಜಯೇಂದ್ರಗೆ ಡಬಲ್ ಟಿಕೆಟ್ ಕೊಡುತ್ತಾರೆ ಅಷ್ಟೆ.

Share This Article