ಚಿತ್ರದುರ್ಗ: ಜನರಿಗೆ ಬಾರಿ ಉಪಟಳ ನೀಡ್ತಿದ್ದ ಏಳು ವರ್ಷದ ಕರಡಿ (Bear) ಕೊನೆಗೂ ಸೆರೆಯಾಗಿದೆ.
ಚಿತ್ರದುರ್ಗ (Chitradurga) ಜಿಲ್ಲೆ ಹೊಸದುರ್ಗ (Hosadurga) ಪಟ್ಟಣದ ಬಳಿ ಕರಡಿ ಸೆರೆಯಾಗಿದೆ. ಕಳೆದ ಒಂದು ವಾರದಿಂದ ಹೊಸದುರ್ಗ ಪಟ್ಟಣದಲ್ಲಿ ಕರಡಿ ಉಪಟಳ ನೀಡುತ್ತಿದ್ದು, ಬೆಳಗ್ಗಿನ ಜಾವ ಹಾಗೂ ಸಂಜೆ ವೇಳೆ ಜನವಸತಿ ಪ್ರದೇಶಕ್ಕೆ ಧಾವಿಸಿ ಭಾರೀ ಆತಂಕ ಸೃಷ್ಟಿಸಿತ್ತು.
ಇದರಿಂದಾಗಿ ಜನರು ಮನೆಯಿಂದ ಹೊರಬರಲು ಯೋಚಿಸುತಿದ್ದರು. ಕರಡಿ ಉಪಟಳದಿಂದ ಬೇಸತ್ತಿದ್ದ ನಾಗರೀಕರು ಕೆಲ ದಿನಗಳಿಂದ ವಾಯುವಿಹಾರಕ್ಕೂ ತೆರಳಿರಲಿಲ್ಲ. ಹೀಗಾಗಿ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ
ಹೊಸದುರ್ಗದ ಸಾರಿಗೆ ಬಸ್ ನಿಲ್ದಾಣ ಬಳಿ ಕಾಣಿಸಿಕೊಂಡಿದ್ದ ಕರಡಿಯನ್ನು ಕಂಡಿದ್ದ ಹೊಸದುರ್ಗ ಪಟ್ಟಣದ ಜನರು ಬಾರಿ ಭಯ ಭೀತರಾಗಿದ್ದರು. ಬಳಿಕ ಜನರ ಗದ್ದಲದಿಂದ ಗಾಬರಿಗೊಂಡು ಹೊಸದುರ್ಗ ಹೊರವಲಯದಲ್ಲಿನ ಪೊದೆಯಲ್ಲಿ ಸೇರಿಕೊಂಡಿದ್ದ ಕರಡಿಗೆ ಅರವಳಿಕೆ ಮದ್ದು ನೀಡಿ ಕರಡಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಗಾಬರಿಯಿಂದ ಪೊದೆ ಸೇರಿದ್ದ ಕರಡಿಯನ್ನು ಸುರಕ್ಷಿತವಾಗಿ ಸೆರೆ ಹಿಡಿದ ಅಧಿಕಾರಿಗಳು ಅದನ್ನು ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಪ್ರಾಣಿಸಂಗ್ರಹಾಲಯಕ್ಕೆ ಶಿಫ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.