ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ಆಯುಕ್ತ ಭೂಬಾಲನ್ ಅವರು ವರ್ಗಾವಣೆಯಾಗುವ ಸಮಯದಲ್ಲಿ ಪಾಲಿಕೆಯಲ್ಲಿ ಸುಮಾರು 9 ರಿಂದ 12 ಕೋಟಿ ರೂಪಾಯಿ ಹಣ ಉಳಿದಿತ್ತು. ಆದರೆ ಅವರು ಮತ್ತೆ ವಾಪಸ್ ಬರುವ ವೇಳೆಗೆ ಎಲ್ಲಾ ಹಣ ಮಂಗಮಾಯವಾಗಿದೆ.
ಇದರಿಂದ ಮಹಾನಗರ ಪಾಲಿಕೆಯಲ್ಲಿ ದಿಕ್ಕುತಪ್ಪಿದ ಆಡಳಿತ ಮತ್ತು ಹಣಕಾಸು ನಿರ್ವಹಣೆಯನ್ನು ಸರಿದಾರಿಗೆ ತರಲು ಆಯುಕ್ತ ಭೂಬಾಲನ್ ಹೆಣಗುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೆಲ ಬಿಗಿಹಿಡಿತದಿಂದ ಭೂಬಾಲನ್ ಅವರಿಗೆ ಸುಸೂತ್ರವಾಗಿ, ಸ್ವತಂತ್ರವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಎರಡನೇ ಬಾರಿಗೆ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಭೂಬಾಲನ್ ಅವರು ರಾಜಕಾರಣಿಗಳ ಅಸಹಕಾರ ಮನೋಭಾವದಿಂದ ಕೆಲಸ ಮಾಡಲು ಅಷ್ಟೊಂದು ಉತ್ಸುಕತೆ ತೋರುತ್ತಿಲ್ಲ ಎಂಬ ಚರ್ಚೆ ಕೂಡ ಸಾರ್ವಜನಿಕ ವಲಯದಲ್ಲಿ ಜೋರಾಗಿಯೇ ನಡೆಯುತ್ತಿದೆ.
ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಭೂಬಾಲನ್ ಅವರು ತುಮಕೂರು ಪಾಲಿಕೆಯಿಂದ ವರ್ಗಾವಣೆಗೊಂಡಿದ್ದರು. ಭೂಬಾಲನ್ ಅವರು ವರ್ಗಾವಣೆಯಾಗುವ ಸಮಯದಲ್ಲಿ ಪಾಲಿಕೆಯ ಖಜಾನೆಯಲ್ಲಿ ಸುಮಾರು 12 ಕೋಟಿ ರೂಪಾಯಿ ಇತ್ತು. ಜನರಿಂದ ನೀರು ಹಾಗೂ ಇತರೆ ತೆರಿಗೆಗಳನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿ ಇಷ್ಟೊಂದು ಹಣವನ್ನು ಉಳಿಸಿ ಭೂಬಾಲನ್ ವರ್ಗಾವಣೆ ಆಗಿ ಹೋಗಿದ್ದರು.
ಅತ್ತ ಭೂಬಾಲನ್ ಅವರು ವರ್ಗಾವಣೆ ಗೊಳ್ಳುತ್ತಿದ್ದಂತೆ ಇತ್ತ ಪಾಲಿಕೆ ಆಡಳಿತ ಹಳ್ಳ ಹಿಡಿದಿತ್ತು. ಆಗ ತುಮಕೂರು ಉಪವಿಭಾಗಾಧಿಕಾರಿ ಶಿವಕುಮಾರ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಇವರು ಬಂದ ಮೇಲೆ ಭೂಬಾಲನ್ ಉಳಿಸಿಹೋಗಿದ್ದ ಸುಮಾರು 9 ರಿಂದ 12 ಕೋಟಿ ರೂಪಾಯಿ ಹಣ ಖಾಲಿಯಾಗಿತ್ತು. ಎರಡು ಮೂರು ತಿಂಗಳಿನಲ್ಲಿಯೇ ಕೋಟ್ಯಂತರ ರೂಪಾಯಿ ಹಣ ಧನದಾಹಿಗಳ ಕೈಗೆ ಸೇರಿತ್ತು.
ಈಗ ಪಾಲಿಕೆ ಖಜಾನೆ ಖಾಲಿ ಆಗಿದೆ. ಇಷ್ಟೊಂದು ಮೊತ್ತ ಯಾವ ಕೆಲಸಕ್ಕೆ ವೆಚ್ಚವಾಯ್ತು? ಲೆಕ್ಕವನ್ನು ಯಾರಿಗೆ ಕೇಳೋದು ಎಂದು ಜನರಲ್ಲಿ ಪ್ರಶ್ನೆ ಹುಟ್ಟುಕೊಂಡಿದೆ. ತುಮಕೂರು ನಗರಪಾಲಿಕೆಯ ಆಯುಕ್ತರಾಗಿ ಭೂಬಾಲನ್ ಅವರು ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಮೊದಲು ಇದ್ದ ಹುಮ್ಮಸ್ಸು, ಉತ್ಸಾಹ ಸ್ವಲ್ಪ ಕಡಿಮೆಯಾಗಿದೆ. ಆದರೆ ಈಗ ಬಂದಿರುವ ವರ್ತಮಾನವೆಂದರೆ ಇಂಥವರ ನಡುವೆ ಹೇಗೆ ಕೆಲಸ ಮಾಡುವುದು? ಕೆಲಸ ಮಾಡಲು ಮನಸ್ಸೇ ಬರುತ್ತಿಲ್ಲ ಎಂದು ಭೂಬಾಲನ್ ಕೆಲವರಲ್ಲಿ ಹೇಳಿಕೊಂಡು ನೋವು ತೋಡಿಕೊಂಡಿದ್ದಾರೆ ಎಂದು ಪಾಲಿಕೆ ಸಿಬ್ಬಂದಿ ತಿಳಿಸಿದ್ದಾರೆ.