ಮಡಿಕೇರಿ: ಜಿಲ್ಲೆಯ ಮಡಿಕೇರಿ ತಾಲೂಕಿನ ಪೆರಾಜೆ, ಚೆಂಬು ಹಾಗೂ ಕರಿಕೆ ಭಾಗದಲ್ಲಿ ಇಂದು ಭೂಕಂಪನವಾಗಿದ್ದು, ಈ ಮೂಲಕ ಒಟ್ಟು 7 ಬಾರಿ ಭೂಕಂಪನವಾದ ಘಟನೆ ನಡೆದಿದೆ.
ಕೊಡಗು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಮಳೆಯ ಆರ್ಭಟಕ್ಕೆ ಕೊಡಗಿನ ಹಲವೆಡೆ ಸಣ್ಣಪುಟ್ಟ ಗುಡ್ಡ ಕುಸಿಯಲು ಆರಂಭವಾಗಿದ್ದು, ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಹಾರಂಗಿ ಜಲಾನಯನ ಪ್ರದೇಶದಲ್ಲೂ ಭಾರೀ ಮಳೆಯಾಗುತ್ತಿದ್ದು, ಹಾರಂಗಿ ಜಲಶಯ ಬಹುತೇಕ ಭರ್ತಿಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 1200 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಅಷ್ಟೇ ಅಲ್ಲದೇ ಕೊಡಗಿನ ಗಡಿಭಾಗದಲ್ಲಿ ಮತ್ತೆ ಭೂಕಂಪನ ಆಗಿದೆ.
ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೂಕಂಪದ ಎಫೆಕ್ಟ್ ಏನೋ ಇದೀಗ ಜಿಲ್ಲೆಯ ಹಲವೆಡೆ ಗುಡ್ಡ ಕುಸಿತವಾಗಿದೆ ಎಂಬ ಅನುಮಾನಗಳು ಕಾಡತೊಡಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 7 ಭೂಕಂಪಗಳಾಗಿದ್ದು, ಭೂಕಂಪಗಳಾದ ಪ್ರದೇಶದಲ್ಲೇ ಗುಡ್ಡಗಳು ಕುಸಿಯಲಾರಂಭಿಸಿದೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಪೂಜಾರಿಗದ್ದೆ ಗಿರಿಧರ ಎಂಬವರ ಮನೆ ಮೇಲೆ ಮಣ್ಣು ಕುಸಿತವಾಗಿದೆ.
ಮನೆಯ ಸಮೀಪವೇ ಇದ್ದ 10ಅಡಿ ಎತ್ತರದಿಂದ ಮಣ್ಣು ಕುಸಿತವಾಗಿದ್ದು, ಮನೆಯವರಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಹಾಗೆ ಮಡಿಕೇರಿ ತಾಲೂಕಿನ ಬೆಟ್ಟತೂರಿನಲ್ಲೂ ಸಣ್ಣಪ್ರಮಾಣದ ಗುಡ್ಡ ಕುಸಿವಾಗಿದೆ. ಮಡಿಕೇರಿ, ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಣ್ಣ ಪ್ರಮಾಣದ ಭೂಕುಸಿತವಾಗಿದ್ದು, ಮಡಿಕೇರಿ ತಾಲೂಕಿನ ಮದೆನಾಡು- ಜೋಡುಪಾಲ ಮಧ್ಯೆ ರಸ್ತೆಗೆ ಮಣ್ಣು ಕುಸಿದಿದ್ದು, ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿತ್ತು.
ನಂತರ ರಸ್ತೆಗೆ ಬಿದ್ದ ಭಾರಿ ಗಾತ್ರದ ಮಣ್ಣನ್ನು ತೆರವುಗೊಳಿಸಿದ ಜಿಲ್ಲಾಡಳಿತ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಇಂದು ಕೂಡ ಭೂಕಂಪನವಾಗಿದೆ. ಜಿಲ್ಲೆಯ ಮಡಿಕೇರಿ ತಾಲೂಕಿನ ಪೆರಾಜೆ, ಚೆಂಬು ಹಾಗೂ ಕರಿಕೆ ಭಾಗದಲ್ಲಿ ಮಧ್ಯಾಹ್ನ 1.20 ಸುಮಾರಿಗೆ ಸಂಭವಿಸಿದೆ. ಭಾರೀ ಶಬ್ದದೊಂದಿಗೆ ಭೂಕಂಪನವಗಿದೆ. ಇದೀಗ ಜಿಲ್ಲೆಯಲ್ಲಿ ಪದೇ ಪದೇ ಭೂಕುಸಿತದೊಂದಿಗೆ ಗುಡ್ಡ ಕುಸಿತಗಳು ಆಗುತ್ತಿರೋದು ಜಿಲ್ಲೆಯ ಜನತೆಯನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಇದನ್ನೂ ಓದಿ: ಕೊಡಗಿನಲ್ಲಿ ಮಧ್ಯರಾತ್ರಿ ಮತ್ತೆ ಭೂಕಂಪನ- ಆತಂಕಕ್ಕೀಡಾದ ಜನ
ಒಟ್ಟಿನಲ್ಲಿ ಇದೀಗ ಜಿಲ್ಲೆಯಲ್ಲಿ ಪದೇ ಪದೇ ಭೂಕಂಪಗಳು ಆಗುತ್ತಿರೋದು ಜಿಲ್ಲೆಯ ಜನತೆಯನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಆದರೆ ಜಿಲ್ಲಾಡಳಿತ ಮಾತ್ರ ಜನತೆ ಯಾವುದಕ್ಕೂ ಭಯ ಪಡುವ ಅಗತ್ಯವಿಲ್ಲ ಎಂಬ ಅಭಯ ನೀಡುತ್ತಿದೆ. ಮತ್ತೊಂದು ಕಡೆ ಮಳೆಯಿಂದ ಜಿಲ್ಲೆಯಲ್ಲಿ ಅವಾಂತರಗಳು ಸೃಷ್ಟಿಯಾಗುತ್ತಿದೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಹೆಚ್ಚಿದ ಆತಂಕ