ಭೋಪಾಲ್: ರಾಮನವಮಿಯಂದು ಮಧ್ಯಪ್ರದೇಶದ ಖಾರ್ಗೋನ್ನಲ್ಲಿ ಭುಗಿಲೆದ್ದ ಹಿಂಸಾಚಾರದ ವೇಳೆ ವ್ಯಕ್ತಿಯೊಬ್ಬರ ಸಾವಿಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ ಮಧ್ಯಪ್ರದೇಶದ ಖಾರ್ಗೋನ್ ನಗರದಲ್ಲಿ ರಾಮನವಮಿಯ ಪ್ರಯುಕ್ತ ನಡೆದ ಮೆರವಣಿಗೆಯ ಸಂದರ್ಭ ಘರ್ಷಣೆ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಇಬ್ರಿಶ್ ಖಾನ್ ಸಾವನ್ನಪ್ಪಿದ್ದರು. ಏಪ್ರಿಲ್ 14ರಂದು ಇಬ್ರಿಶ್ ಖಾನ್ ಕಾಣೆಯಾಗಿದ್ದಾರೆ ಎಂದು ಅವರ ಕುಟುಂಬಸ್ಥರು ದೂರು ನೀಡಿದ್ದರು. ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ – ಜಿಲ್ಲಾ ಪಂಚಾಯತ್ ಪತ್ರವೇ ನಕಲು
ಪೊಲೀಸರು ಏಪ್ರಿಲ್ 10 ರಂದು ಇಬ್ರಿಶ್ ಖಾನ್ ದೇಹವನ್ನು ವಶಪಡಿಸಿಕೊಂಡು, ಮರಣೋತ್ತರ ಪರೀಕ್ಷೆಗೆ ಇಂದೋರ್ಗೆ ಕಳುಹಿಸಿದ್ದರು, ಏಪ್ರಿಲ್ 11 ರಂದು ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಅದರ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದರು.
ಇಬ್ರಿಶ್ ಖಾನ್ ದೇಹವನ್ನು ಅಲ್ಲಿಯವರೆಗೆ ಗುರುತಿಸಲಾಗಿರಲಿಲ್ಲ. ಬಳಿಕ ಏಪ್ರಿಲ್ 14 ರಂದು ಇಬ್ರಿಶ್ ಖಾನ್ ಕುಟುಂಬಸ್ಥರು ನಾಪತ್ತೆಯ ದೂರು ನೀಡಿದ ಬಳಿಕ, ಇಂದೋರ್ನಲ್ಲಿ ಶವವನ್ನು ಗುರುತಿಸಿದ್ದಾರೆ. ಬಳಿಕ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ, ಅಂತ್ಯಕ್ರಿಯೆ ಮಾಡಲಾಯಿತು ಎಂದು ನರೋತ್ತಮ್ ಮಿಶ್ರಾ ತಿಳಿಸಿದ್ದರು. ಇದನ್ನೂ ಓದಿ: ಯೋಗಿ ಸರ್ಕಾರವನ್ನು ಜನರೇ ಬಲ್ಡೋಜರ್ನಿಂದ ಕಿತ್ತೆಸೆಯುವ ದಿನ ಬರಲಿದೆ: ಅಖಿಲೇಶ್ ಯಾದವ್
ಖಾರ್ಗೋನ್ನಲ್ಲಿ ನಡೆದ ಘರ್ಷಣೆಯಲ್ಲಿ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 44 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ 148 ಜನರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇಬ್ರಿಶ್ ಖಾನ್ ಸಾವಿಗೆ ಸಂಬಂಧಿಸಿದಂತೆ ಇದೀಗ ಐವರನ್ನು ಬಂಧಿಸಲಾಗಿದ್ದು, ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.