ಚಿಕ್ಕೋಡಿ: ಮಹಾರಾಷ್ಟ್ರ (Maharashtra) ಹಾಗೂ ಕರ್ನಾಟಕದ (Karnataka) ಗಡಿ ವಿವಾದ ಸುಪ್ರೀಂ ಕೋರ್ಟ್ನಲ್ಲಿ (Supreme Court) ಅಂತಿಮ ಹಂತದ ವಿಚಾರಣೆಗೆ ಬರುತ್ತಿದ್ದಂತೆ ಗಡಿ ವಿವಾದ ಕಾವೇರಿದೆ. ಒಂದು ಕಡೆ ಮಹಾರಾಷ್ಟ್ರದ ಪುಂಡರು ಕರ್ನಾಟಕದ ಬಸ್ಗಳಿಗೆ ಮಸಿ ಬಳಿಯುವುದು, ಕಲ್ಲು ಎಸೆಯುವ ಕಪಿಚೇಷ್ಟೆ ಮಾಡುತ್ತಿದ್ದರೆ ಮತ್ತೊಂದೆಡೆ ಮಹಾರಾಷ್ಟ್ರದ ಜನರು ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಆಗ್ರಹಿಸುತ್ತಿದ್ದಾರೆ.
ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಜನರು ನಮಗೆ ನೀರು ಕೊಡಿ ಇಲ್ಲವಾದರೆ, ನಾವು ಕರ್ನಾಟಕಕ್ಕೆ ಹೋಗುತ್ತೇವೆ ಎನ್ನುವ ನೇರ ಎಚ್ಚರಿಕೆಯನ್ನು ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿದ್ದಾರೆ. ಜತ್ತ ತಾಲೂಕಿನ 42 ಹಳ್ಳಿಗಳ ಜನರ ಒಕ್ಕೊರಲಿನ ಘೋಷಣೆ ಇದಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಉಮದಿ ಗ್ರಾಮದಲ್ಲಿ ಸಭೆ ಸೇರಿದ ಜತ್ತ ನೀರಾವರಿ ಹೋರಾಟ ಸಮಿತಿಯ ಸದಸ್ಯರು ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ, ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕು ಎಂಬ ಸಿಎಂ ಬಸವರಾಜ ಬೊಮ್ಮಾಯಿ (BasavarajBommai) ಹೇಳಿಕೆ ವಿಚಾರವಾಗಿ ಸಭೆ ನಡೆಸಿ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದಿದ್ದಾರೆ. ಹೀಗಾಗಿ ಬಸವರಾಜ ಬೊಮ್ಮಾಯಿ ಮಾಸ್ಟರ್ಸ್ಟ್ರೋಕ್ಗೆ ಮಹಾರಾಷ್ಟ್ರದಲ್ಲಿ ಸಂಚಲನ ಉಂಟಾಗಿದೆ.
ಮಹಾರಾಷ್ಟ್ರದ ಜತ್ತ ತಾಲೂಕಿನ ಜನ ಕರ್ನಾಟಕ ಸಿಎಂ ಅವರಿಗೆ ಇ ಮೇಲ್ ಅಭಿಯಾನ ಆರಂಭಿಸಿದ್ದು, ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಇ ಮೇಲ್ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರಕ್ಕೆ ಎಂಟು ದಿನಗಳ ಗಡುವು ನೀಡಿದ ಹೋರಾಟಗಾರರು ಎಂಟು ದಿನಗಳೊಳಗೆ ಮಹಾರಾಷ್ಟ್ರ ಸಿಎಂ, ಡಿಸಿಎಂ, ಜಲಸಂಪನ್ಮೂಲ ಸಚಿವರು ಜತ್ತ ತಾಲೂಕಿಗೆ ಬರಬೇಕು. ಜತ್ತ ತಾಲೂಕಿನ ನೀರಿನ ಸಮಸ್ಯೆ ಕುರಿತು ಪರಿಹಾರ ಕಲ್ಪಿಸಬೇಕು.
8 ದಿನಗಳೊಳಗೆ ನಿರ್ಧಾರ ಕೈಗೊಳ್ಳದ್ರಿದ್ದರೆ ಕರ್ನಾಟಕ ಸಿಎಂರನ್ನು ಜತ್ತ ತಾಲೂಕಿಗೆ ಆಹ್ವಾನಿಸಲು ನಿರ್ಧಾರ ಮಾಡಲಾಗಿದೆ. ಕರ್ನಾಟಕ ಸಿಎಂರನ್ನು ಆಹ್ವಾನಿಸಿ ಕರ್ನಾಟಕ ಸೇರಲು ನಿರ್ಧಾರ ಪ್ರಕಟಿಸುತ್ತೇವೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಮಹಾರಾಷ್ಟ್ರ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಮಹಾ ಸರ್ಕಾರದ ವಿರುದ್ಧ ಮಹಾರಾಷ್ಟ್ರದ ಜನರೇ ಕಿಡಿಕಾರುತ್ತಿದ್ದಾರೆ.