ಮಂಡ್ಯ: ವಿಸಿ ನಾಲೆಗೆ (VC Canal ) ಕಾರು ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಕಾರು ನಾಲೆಗೆ ಬಿದ್ದ ಪರಿಣಾಮ ನಾಲ್ಕು ಮಂದಿ ಮಹಿಳೆಯರು ಮೃತಪಟ್ಟ ಘಟನೆ ದೊಡ್ಡಮುಲಗೂಡು ಮತ್ತು ಗಾಮನಹಳ್ಳಿ ನಡುವೆ ಶನಿವಾರ ರಾತ್ರಿ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕು ಗಾಮನಹಳ್ಳಿ ಗ್ರಾಮದ ಹೊರವಲಯದ ತುರುಗನೂರು ಬ್ರಾಂಚ್ನ ವಿಶ್ವೇಶ್ವರಯ್ಯ ಉಪ ನಾಲೆಗೆ ಇಂಡಿಕಾ ಕಾರು (Indica Car) ಉರುಳಿ ಬಿದಿದೆ. ರಾತ್ರಿ 8 ಗಂಟೆಯ ಸುಮಾರಿಗೆ ನಡೆದ ಈ ದುರ್ಘಟನೆಯಲ್ಲಿ ಟಿ.ನರಸೀಪುರ ತಾಲೂಕು ಗೊರವನಹಳ್ಳಿ ಗ್ರಾಮದ ದೊಡ್ಡಯ್ಯ ಎಂಬುವರ ಪತ್ನಿ ಮಹದೇವಮ್ಮ, ಸಂಬಂಧಿಕರಾದ ರೇಖಾ, ಸಂಜನಾ, ಮಹದೇವಿ ಮೃತಪಟ್ಟಿದ್ದಾರೆ.
ನಾಲ್ವರು ಮಹಿಳೆಯರು ನಾಲೆಯ ನೀರಿನಲ್ಲೇ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಕಾರು ಚಾಲಕ ಮನೋಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ನಾಲ್ವರು ಮಹಿಳೆಯರ ಶವವನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಇದನ್ನೂ ಓದಿ: ಪ್ರದೀಪ್ ಈಶ್ವರ್ Vs ಸುಧಾಕರ್ ಟಾಕ್ಫೈಟ್ – ಹಾಲಿ, ಮಾಜಿ ಶಾಸಕರ ಬೆಂಬಲಿಗರ ವಿರುದ್ದ ಎಫ್ಐಆರ್ ದಾಖಲು
ತಡೆಗೋಡೆಗೆ ಡಿಕ್ಕಿ ಹೊಡೆದು ನಾಲೆಗೆ ಕಾರು ಬಿದ್ದಿದೆ. ಚಾಲಕ ವೇಗವಾಗಿ ಕಾರನ್ನು ಚಲಾಯಿಸಿದ್ದರಿಂದ ಈ ದುರ್ಘಟನೆ ಸಂಭವಿಸರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೃತದೇಹಗಳ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ್, ಎಸ್ಪಿ ಯತೀಶ್ ಭೇಟಿ ನೀಡಿದ್ದಾರೆ.
ಆದಿಚುಂಚನಗಿರಿಯಲ್ಲಿ ಮಹದೇವಮ್ಮ ಅವರ ಮನೆಯವರು ಆಯೋಜನೆ ಮಾಡಲಿದ್ದ ದೇವರ ಕಾರ್ಯಕ್ಕೆ ಸಂಬಂಧಿಕರನ್ನು ಆಹ್ವಾನಿಸಲು ಗೊರವನಹಳ್ಳಿಯಿಂದ ದೊಡ್ಡಮಲಗೂಡಿಗೆ ಚಾಲಕ ಸೇರಿ ಐದು ಮಂದಿ ಹೋಗುತ್ತಿದ್ದರು. ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ ತಾಲೂಕು ತಿಬ್ಬನಹಳ್ಳಿ ಬಳಿ ವಿಶ್ವೇಶ್ವರಯ್ಯ ನಾಲೆಗೆ ಗುರುವಾರ ಕಾರು ಮಗುಚಿ ಬಿದ್ದು ಶಿವಳ್ಳಿ ಗ್ರಾಮದ ಲೋಕೇಶ್ ಮೃತಪಟ್ಟಿದ್ದರು. 2018ರಲ್ಲಿ ಮಂಡ್ಯ ಜಿಲ್ಲೆಯ ಕನಗನಮರಡಿ ಗ್ರಾಮದ ಕಾವೇರಿ ನದಿಯ ವಿಸಿ ನಾಲೆಗೆ ಬಸ್ ಉರುಳಿ 30 ಮಂದಿ ಸಾವನ್ನಪ್ಪಿದ್ದರು.
Web Stories